HEALTH TIPS

Air India ವಿಮಾನ ಅಪಘಾತದ ಬಗ್ಗೆ 'ಅಗತ್ಯ' ಮಾಹಿತಿ ನಾವೇ ಪ್ರಕಟಿಸುತ್ತೀವಿ: ಅಂತಾರಾಷ್ಟ್ರೀಯ ಮಾಧ್ಯಮಗಳ 'ಬೇಜವಾಬ್ದಾರಿ' ವರದಿ ಕುರಿತು AAIB ಖಂಡನೆ!

ನವದೆಹಲಿ: 260ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡ ಏರ್ ಇಂಡಿಯಾ ವಿಮಾನ ಅಪಘಾತದ ತನಿಖೆಗೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಹೊಸ ಮಾಹಿತಿಗಳನ್ನು ನಾವೇ ಪ್ರಕಟಿಸುತ್ತೀವಿ ಎಂದು ಭಾರತದ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಹೇಳಿದೆ.

ವಿಮಾನ ಅಪಘಾತದಿಂದಾಗಿ ಸಾವನ್ನಪ್ಪಿದ ಪ್ರಯಾಣಿಕರು, ಸಿಬ್ಬಂದಿ ಮತ್ತು ಇತರರ ಕುಟುಂಬ ಸದಸ್ಯರ ಸೂಕ್ಷ್ಮತೆಯನ್ನು ಗೌರವಿಸುವುದು ಅತ್ಯಗತ್ಯ ಎಂದು ತನಿಖಾ ಸಂಸ್ಥೆ ಒತ್ತಿಹೇಳಿದೆ. ತಾಂತ್ರಿಕ, ಸಾರ್ವಜನಿಕ ಹಿತಾಸಕ್ತಿಯನ್ನು ಹೊಂದಿರುವ ತನಿಖೆಗೆ ಸಂಬಂಧಿಸಿದ ವಿವರಗಳನ್ನು 'ಅಗತ್ಯವಿದ್ದಾಗ ಮತ್ತು ಅಗತ್ಯವಿರುವಾಗ' ತಾವೇ ಪ್ರಕಟಿಸುತ್ತೇವೆ ಎಂದು ಹೇಳಿದೆ.

ತನಿಖೆಯ ಕುರಿತಾದ ಅಂತರರಾಷ್ಟ್ರೀಯ ಮಾಧ್ಯಮ ವರದಿಗಳನ್ನು AAIB ಟೀಕಿಸಿದ್ದು ಆ ವರದಿ 'ಬೇಜವಾಬ್ದಾರಿ' ಎಂದು ಹೇಳಿದೆ. ಅಂತರರಾಷ್ಟ್ರೀಯ ಕೆಲವು ಮಾಧ್ಯಮಗಳು ಆಯ್ದ ಮತ್ತು ಪರಿಶೀಲಿಸದ ವರದಿಯ ಮೂಲಕ ಪದೇ ಪದೇ ತೀರ್ಮಾನಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಅಂತಹ ಕ್ರಮಗಳು ಬೇಜವಾಬ್ದಾರಿಯಿಂದ ಕೂಡಿರುತ್ತವೆ. ವಿಶೇಷವಾಗಿ ತನಿಖೆ ನಡೆಯುತ್ತಿರುವಾಗ ಎಂದು AAIB ಮಹಾನಿರ್ದೇಶಕ ಜಿ ವಿ ಜಿ ಯುಗಂಧರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತನಿಖಾ ಪ್ರಕ್ರಿಯೆಯ ಸಮಗ್ರತೆಯನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಅಕಾಲಿಕ ನಿರೂಪಣೆಗಳನ್ನು ಹರಡುವುದನ್ನು ನಾವು ಸಾರ್ವಜನಿಕರು ಮತ್ತು ಮಾಧ್ಯಮಗಳು ತಡೆಯಬೇಕೆಂದು ಒತ್ತಾಯಿಸುತ್ತೇವೆ ಎಂದು ಅವರು ಹೇಳಿದರು. ಪೈಲಟ್ ದೋಷದಿಂದಾಗಿ ಜೂನ್ 12ರಂದು ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿದೆ ಎಂದು ವರದಿಗಳು ಬಂದ ಹಿನ್ನೆಲೆಯಲ್ಲಿ ಈ ಹೇಳಿಕೆ ಬಂದಿದೆ. ಅಹಮದಾಬಾದ್‌ನಿಂದ ಲಂಡನ್ ಗ್ಯಾಟ್ವಿಕ್‌ಗೆ ಹೋಗುತ್ತಿದ್ದ ಬೋಯಿಂಗ್ 787-8 ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಯಿತು.

ವಾಲ್ ಸ್ಟ್ರೀಟ್ ಜರ್ನಲ್ ವರದಿಯ ಪ್ರಕಾರ, ಏರ್ ಇಂಡಿಯಾ ವಿಮಾನದ ಇಬ್ಬರು ಪೈಲಟ್‌ಗಳ ನಡುವಿನ ಸಂಭಾಷಣೆಯ ಕಾಕ್‌ಪಿಟ್ ರೆಕಾರ್ಡಿಂಗ್, ವಿಮಾನದ ಎಂಜಿನ್‌ಗಳಿಗೆ ಹೋಗುವ ಇಂಧನವನ್ನು ನಿಯಂತ್ರಿಸುವ ಸ್ವಿಚ್‌ಗಳನ್ನು ಕ್ಯಾಪ್ಟನ್ ಆಫ್ ಮಾಡಿದ್ದಾರೆ ಎಂದು ಸೂಚಿಸಿದೆ. ಭಾರತದ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಶನಿವಾರ ಬಿಡುಗಡೆ ಮಾಡಿದ ವರದಿಯು ಜೂನ್ 12ರ ದುರಂತಕ್ಕೆ ಯಾವುದೇ ತೀರ್ಮಾನ ಅಥವಾ ಹೊಣೆಗಾರಿಕೆಯನ್ನು ಹೇಳಿಲ್ಲ. ಆದರೆ ಒಬ್ಬ ಪೈಲಟ್ ಇನ್ನೊಬ್ಬ ಪೈಲಟ್ ಗೆ ಇಂಧನವನ್ನು ಏಕೆ ಕಡಿತಗೊಳಿಸಿದ್ದೀರಿ ಎಂದು ಕೇಳಿದ್ದಾರೆ. ಎರಡನೇ ಪೈಲಟ್ ಇಲ್ಲ, ನಾನು ಕಡಿತಗೊಳಿಸಿಲ್ಲ ಎಂದು ಪ್ರತಿಕ್ರಿಯಿಸಿದರು ಎಂದು ವರದಿ ಸೂಚಿಸಿದೆ.

ಮೊದಲು ಆಶ್ಚರ್ಯ ವ್ಯಕ್ತಪಡಿಸಿದ ಪೈಲಟ್ ನಂತರ ಭಯಭೀತರಾದರು. ಇನ್ನು ಮುಖ್ಯ ಪೈಲಟ್ ಶಾಂತವಾಗಿ ಉಳಿದಂತೆ ಕಾಣುತ್ತಿತ್ತು ಎಂದು ರಾಯಿಟರ್ಸ್ WSJ ಅನ್ನು ಉಲ್ಲೇಖಿಸಿ ವರದಿ ಮಾಡಿದೆ. ಈ ವರದಿಗೆ ಭಾರತದ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA), ಬೋಯಿಂಗ್ ಮತ್ತು ಏರ್ ಇಂಡಿಯಾ ಇನ್ನೂ ಪ್ರತಿಕ್ರಿಯಿಸಿಲ್ಲ. ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಮತ್ತು ಪ್ರಥಮ ಅಧಿಕಾರಿ ಕ್ಲೈವ್ ಕುಂದರ್ ಅವರು ಕ್ರಮವಾಗಿ 15,638 ಗಂಟೆಗಳು ಮತ್ತು 3,403 ಗಂಟೆಗಳ ಒಟ್ಟು ಹಾರಾಟದ ಅನುಭವವನ್ನು ಹೊಂದಿದ್ದರು. ಗುಜರಾತ್‌ನ ಅಹಮದಾಬಾದ್‌ನಲ್ಲಿ ಬೋಯಿಂಗ್ ಡ್ರೀಮ್‌ಲೈನರ್ 787-8 ವಿಮಾನದ AI 171 ಅಪಘಾತದಲ್ಲಿ 229 ಪ್ರಯಾಣಿಕರು, 12 ಸಿಬ್ಬಂದಿ ಹಾಗೂ ಕಟ್ಟಡದಲ್ಲಿದ್ದ 19 ಜನರು ಸೇರಿದಂತೆ 260 ಜನರು ಸಾವನ್ನಪ್ಪಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries