ಮುಂಬೈ: ಇಲ್ಲಿನ ರಾಯಗಢ ಜಿಲ್ಲೆಯ ರೆವದಂಡಾ ಗ್ರಾಮದ ಕರಾವಳಿ ತೀರದಲ್ಲಿ ಅನುಮಾನಾಸ್ಪದವಾಗಿ ದೋಣಿಯೊಂದು ಪತ್ತೆಯಾಗಿದ್ದು, ರಾಜ್ಯದ ಕರಾವಳಿ ತೀರದುದ್ದಕ್ಕೂ ಭದ್ರತೆಯನ್ನು ಹೆಚ್ಚಿಸಲಾಗಿದೆ.
'ಗ್ರಾಮದಿಂದ ಎರಡು ನಾಟಿಕಲ್ ಮೈಲಿ ದೂರದಲ್ಲಿರುವ ಕೊರ್ಲಾಯಿ ಭಾಗದಲ್ಲಿ ದೋಣಿ ಕಂಡುಬಂದಿದೆ. ದೋಣಿಯ ಮೇಲೆ ಬೇರೆ ದೇಶದ ಗುರುತು ಇರುವುದು ಮೇಲ್ನೋಟಕ್ಕೆ ಕಂಡುಬಂದಿದೆ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸ್ಥಳಕ್ಕೆ ರಾಯಗಢ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ, ಕ್ಷಿಪ್ರ ಪ್ರತಿಕ್ರಿಯೆ ತಂಡ ಹಾಗೂ ನೌಕಾ ಸೇನೆ ಹಾಗೂ ಕರಾವಳಿ ತಟರಕ್ಷಕ ಪಡೆಯ ಸಿಬ್ಬಂದಿ ಭೇಟಿ ನೀಡಿದ್ದಾರೆ.
'ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಂಚಲ್ ದಲಾಲ್ ನೇತೃತ್ವದ ಹಿರಿಯ ಪೊಲೀಸ್ ಅಧಿಕಾರಿಗಳ ತಂಡವು ಪರಿಸ್ಥಿತಿ ಕುರಿತು ಪರಾಮರ್ಶೆ ನಡೆಸುತ್ತಿದೆ.
ಭಾರಿ ಮಳೆ ಹಾಗೂ ಬಿರುಸಾದ ಗಾಳಿಯ ನಡುವೆಯೂ ಬಾರ್ಜ್ ನೆರವಿನಿಂದ ಸ್ಥಳಕ್ಕೆ ತೆರಳಲು ದಲಾಲ್ ಯತ್ನಿಸಿದರು. ಆದರೆ, ಪ್ರತಿಕೂಲ ಹವಾಮಾನದಿಂದ ಅಲ್ಲಿಗೆ ತೆರಳಲು ಸಾಧ್ಯವಾಗಲಿಲ್ಲ. ಮುಂಜಾಗ್ರತಾ ಕ್ರಮವಾಗಿ ಇಡೀ ಜಿಲ್ಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.




