ಗುವಾಹಟಿ: ಅರುಣಾಚಲ ಪ್ರದೇಶದ ಕುಂಡಾವೊ-ಚು ನದಿಗೆ ಅಡ್ಡಲಾಗಿ 110 ಅಡಿ ಉದ್ದದ ಸೇತುವೆ ನಿರ್ಮಿಸಿದ ಭಾರತೀಯ ಸೇನೆಯ ಸ್ಪಿಯರ್ ಕಾರ್ಪ್ಸ್ ಯೋಧರು ಲೋಹಿತ್ ಕಣಿವೆ ಮತ್ತು ಸುತ್ತಮುತ್ತಲಿನ ಪ್ರದೇಶದ ಜನರಿಗೆ ಓಡಾಟಕ್ಕೆ ಸುಲಭ ಸಂಪರ್ಕ ಕಲ್ಪಿಸಿದ್ದಾರೆ.
ಈ ಹೊಸದಾಗಿ ನಿರ್ಮಿಸಲಾದ ಸೇತುವೆಯು ದೂರದ ಪ್ರದೇಶದಲ್ಲಿ ಮಿಲಿಟರಿ ಕಾರ್ಯಾಚರಣೆಗೆ ಮತ್ತು ನಾಗರಿಕ ಮೂಲಸೌಕರ್ಯ ಎರಡಕ್ಕೂ ಗಮನಾರ್ಹ ಉತ್ತೇಜನ ನೀಡುತ್ತದೆ ಎಂದು ಸೇನೆ ತಿಳಿಸಿದೆ.
ಈ ಸೇತುವೆ ಸಂಪರ್ಕವನ್ನು ಉತ್ತಮಗೊಳಿಸಲು, ಸೇನಾ ತುಕಡಿಯನ್ನು ಮತ್ತು ಶಸ್ತ್ರಾಸ್ತ್ರಗಳನ್ನು ಸಾಗಿಸಲು ನೆರವಾಗಲಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಸ್ಥಳೀಯ ನಿವಾಸಿಗಳು ಸೇತುವೆ ಮೂಲಕ ಸಾಗಿ ಮಾರುಕಟ್ಟೆ ಸೇರಿ ಅಗತ್ಯ ಸೇವೆಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದು ಎಂದಿದೆ.
ಸೇತುವೆ ನಿರ್ಮಾಣದ ವಿಡಿಯೊವನ್ನು ಸೇನೆ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿದೆ.
ಅರುಣಾಚಲ ಪ್ರದೇಶದ ಹಲವೆಡೆ ವ್ಯತಿರಿಕ್ತ ಹವಾಮಾನ ಪರಿಸ್ಥಿತಿಗಳು ಎದುರಾಗುತ್ತವೆ. ಅಂತಹ ಸಂದರ್ಭಗಳಲ್ಲಿ ರಸ್ತೆಯನ್ನು ಅವಲಂಬಿಸಿ ಸಂಚರಿಸುವುದು ಸಾಧ್ಯವಾಗದು. ಹೀಗಾಗಿ ನದಿಯನ್ನು ದಾಟಲು ಸುಲಭವಾಗುವಂತೆ ಸೇತುವೆ ನಿರ್ಮಿಸಿ ಸೇನಾ ಸಿಬ್ಬಂದಿ ಎಂಜಿನಿಯರ್ಗಳಾಗಿದ್ದಾರೆ.




