ನವದೆಹಲಿ: ಸಣ್ಣ ಪುಟ್ಟ ತಪ್ಪುಗಳಿಗೆ ಶಿಕ್ಷೆಯಿಂದ ವಿನಾಯಿತಿ ನೀಡುವ, ಸುಗಮ ಜೀವನ ನಿರ್ವಹಣೆ ಹಾಗೂ ಸುಲಲಿತ ವ್ಯವಹಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ 'ಜನ ವಿಶ್ವಾಸ್ (ತಿದ್ದುಪಡಿ)-2025' ಮಸೂದೆಯನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸಲಾಗಿದೆ.
ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಅವರು ಮಸೂದೆಯನ್ನು ಮಂಡಿಸಿದರು.
ವ್ಯಾಪಾರ ನಡೆಸುವವರಲ್ಲಿ ವಿಶ್ವಾಸ ಮೂಡಿಸುವ ಗುರಿಯನ್ನು ಈ ಮಸೂದೆ ಹೊಂದಿದೆ. ಇದನ್ನು ಪರಿಶೀಲನಾ ಸಮಿತಿಗೆ ವರ್ಗಾಯಿಸಲಾಗಿದೆ. ಸಂಸತ್ನ ಮುಂದಿನ ಅಧಿವೇಶನದ ಮೊದಲ ದಿನದಂದು ಈ ಸಮಿತಿಯು ಈ ಸಂಬಂಧ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ.
ಬಿಹಾರದಲ್ಲಿ ಮತದಾರರ ವಿಶೇಷ ಸಮಗ್ರ ಪಟ್ಟಿ ಪರಿಷ್ಕರಣೆ ಹಾಗೂ ಇತರೆ ವಿಚಾರಗಳಿಗೆ ಸಂಬಂಧಿಸಿದಂತೆ ಚರ್ಚೆಗೆ ಕೋರಿ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿದ ಹೊರತಾಗಿಯೂ ಮಸೂದೆಯನ್ನು ಮಂಡಿಸಲಾಯಿತು.
ಈ ಮಸೂದೆಯ ಮೂಲಕ 335 ನಿಬಂಧನೆಗಳನ್ನು ತಿದ್ದುಪಡಿ ಮಾಡುವ ಪ್ರಸ್ತಾವವಿದೆ. ವ್ಯವಹಾರಗಳ ಸರಳೀಕರಣಗೊಳಿಸಲು 288 ನಿಬಂಧನೆಗಳನ್ನು ಅಪರಾಧ ಮುಕ್ತಗೊಳಿಸಲಾಗುತ್ತಿದ್ದು, 67 ನಿಬಂಧನೆಗಳು ಸುಗಮ ಜೀವನಕ್ಕೆ ಸಂಬಂಧಿಸಿರಲಿವೆ.




