ಕಾಸರಗೋಡು: ಕನ್ನಡದ ಪ್ರಥಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳು, ಬಹುಭಾಷಾ ವಿದ್ವಾಂಸ ಹಾಗೂ ಮಹಾನ್ ವ್ಯಕ್ತಿತ್ವ ಹೊಂದಿದ ಮೇರು ಸಾಹಿತಿಯಾಗಿ ಖ್ಯಾತಿ ಗಳಿಸಿರುವುದಾಗಿ ಚಲನ ಚಿತ್ರ ಸಾಹಿತಿ, ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ತಿಳಿಸಿದ್ದಾರೆ.
ಅವರು ಮಂಜೇಶ್ವರ ಗೋವಿಂದ ಪೈ ಅವರ ಹೆಸರಲ್ಲಿ ಕಾಸರಗೋಡಿನ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಸ್ಥಾಪಿಸಿದ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು. ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಸ್ಥಾಪಿಸಿದ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸುವುದು ಬದುಕಿನ ಮಹಾ ಭಾಗ್ಯ ಎಂದು ತಿಳಿಸಿದ ಅವರು, ರಾಷ್ಟ್ರಕವಿಗಳ ಜೀವನ ಸಾಧನೆಯ ಕುರಿತು ಚಲನ ಚಿತ್ರವೊಂದು ನಿರ್ಮಾಣವಾಗಲಿದ್ದು ಅದರ ಸಿದ್ಧತೆ ನಡೆಯುತ್ತಿರುವುದಾಗಿಯೂ ತಿಳಿಸಿದರು.
ಕ. ಸಾ. ಪ. ಕೇರಳ ಗಡಿನಾಡ ಘಟಕ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೋಟ್ಟೆತೋಡಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ನಿರ್ದೇಶಕ ಡಾ. ವೆಂಕಟ್ರಮಣ ಹೊಳ್ಳ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಶಸ್ತಿ ಪ್ರದಾನ ಬಳಿಕ ಗಣೇಶ್ ಕಾಸರಗೋಡು ದಂಪತಿಯನ್ನು ಗೌರವಿಸಲಾಯಿತು. ಕನ್ನಡ ಭವನ ಮತ್ತು ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಸ್ಥಾಪಕ ಸಂಚಾಲಕ ಡಾ. ವಾಮನ್ ರಾವ್ ಬೇಕಲ್-ಸಂದ್ಯಾ ರಾಣಿ ಟೀಚರ್ ಸಮಾರಂಭ ಉದ್ಘಾಟಿಸಿದರು. ಗಡಿನಾಡ ಚೇತನ ಪ್ರಶಸ್ತಿ ಪುರಸ್ಕøತ ರಾಧಾಕೃಷ್ಣ ಕೆ ಉಳಿಯತಡ್ಕ ಅಭಿನಂದನಾ ಭಾಷಣ ಮಾಡಿದರು. ಕನ್ನಡ ಪತ್ರಕರ್ತರ ಕ್ಷೇಮಾಬಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಪು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಪತ್ರಕರ್ತ ಜಗನ್ನಾಥ್ ಶೆಟ್ಟಿ, ಜನಪ್ರಿಯೆ ವೈದ್ಯೆ ಡಾ ಸುಜಯಾ ಪಾಂಡ್ಯ, ಉಪಸ್ಥಿತರಿದ್ದರು. ಸಂಘಟನಾ ಕಾರ್ಯದರ್ಶಿ ರಾಜೇಶ್ ಕೋಟೆಕಣಿ ಸ್ವಾಗತಿಸಿದರು. ಕನ್ನಡ ಭವನದ ನಿರ್ದೇಶಕ ವಿಶಾಲಾಕ್ಷ ಪುತ್ರಕಳ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ವಸಂತ್ ಕೆರೆಮನೆ ವಂದಿಸಿದರು. ಜಾನಪದ ಕಲಾವಿದೆ ಸುಭಾಷಿನಿ ಚಂದ್ರ ಕನ್ನಟಿಪಾರೆ ತಂಡದಿಂದ ಜಾನಪದ ನೃತ್ಯ, ಭಕ್ತಿ ಭಾವಗೀತೆ, ಪಾಡ್ದನ ಗಾಯನ ಜರುಗಿತು.


