ಕಾಸರಗೋಡು: ಕೃಷಿ ಸಂಸ್ಕøತಿಯ ಪ್ರತೀಕವಾಗಿರುವ ಓಣಂ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಿಸಲಾಯಿತು. ಆದರ್ಶ ರಾಜ ಮಹಾಬಲಿ ವರ್ಷಕ್ಕೊಂದು ಬಾರಿ ತಾನು ಆಳುತ್ತಿದ್ದ ಭೂಮಿ, ಕೃಷಿ ಹಾಗೂ ತನ್ನ ಪ್ರಜೆಗಳ ಯೋಗ ಕ್ಷೇಮ ಎಲ್ಲವನ್ನೂ ನೋಡಿಕೊಂಡು ಹೋಗುವ ಅವಕಾಶವನ್ನು ವಿಷ್ಣುವಿನಿಂದ ಪಡೆದುಕೊಂಡಿರುವ ಪ್ರತೀಕವಾಗಿ ಓಣಂ ಹಬ್ಬವನ್ನು ಆಚರಿಸಲಾಗುತ್ತಿದ್ದು, ಆ. 27ರಿಂದ ತೊಡಗಿ ಸೆ.5ರ ವರೆಗೂ ಆಚರಿಸಿಕೊಂಡು ಬರಲಾಗಿದೆ.
ಶುಕ್ರವಾರ ಬೆಳಗ್ಗಿನಿಂದಲೇ ದೇವಾಲಯಗಳಲ್ಲಿ ಭಕ್ತಾದಿಗಳ ದಟ್ಟಣೆ ಹೆಚ್ಚಾಗಿತ್ತು. ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ, ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇರಿದಂತೆ ಜಿಲ್ಲೆಯ ನಾನಾ ದೇವಾಲಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ನೆರೆದಿದ್ದರು.
ಮಲಯಾಳಿಗರ ಮಾತಿನಂತೆ, "ಅತ್ತಂ ಪತ್ತ್ ಪೊನ್ನೋಣಂ' ಅಂದರೆ 'ಅತ್ತಂ'ನಿಂದ(ಆ.27)ಆರಂಭಗೊಂಡು ಹತ್ತನೇ ದಿನ(ಸೆ. 5)ದಂದು ತಿರುವೋಣಂ ಆಚರಿಸುವುದು ವಾಡಿಕೆ.
ಆ. 27ರ ನಂತರ ಪ್ರತಿಯೊಂದು ದಿನವನ್ನೂ ಒಂದೊಂದು ಐತಿಹ್ಯದೊಂದಿಗೆ ಓಣಂ ಆಚರಿಸಿಕೊಂಡು ಬರಲಾಗಿದೆ.
ತಿರುವೋಣಂ ದಿನದಂದು ಬೆಳಗ್ಗೆ ಬೇಗನೆ ಎದ್ದು, ಶುಚಿರ್ಭೂತರಾಗಿ ಮನೆ ಎದುರು ರಂಗೋಲಿ ಬಿಡಿಸಿ, ಹೊಸ ಬಟ್ಟೆ ಧರಿಸಿ ದೇಗುಲ ಸಂದರ್ಶನ ನಡೆಸಿದರು. ಮಧ್ಯಾಹ್ನ ಓಣಂ ಔತಣಕೂಟದಲ್ಲಿ ಪಾಲ್ಗೊಂಡರು. ಮಧ್ಯಾಹ್ನ ನಂತರ ವಿವಿಧ ರೆಸಿಡೆನ್ಶಿಯಲ್ ಅಸೋಸಿಯೇಟ್ಸ್, ಕ್ಲಬ್ಗಳು ಸೇರಿದಂತೆ ವಿವಿಧ ಸಂಘಟನೆಗಳಿಂದ ಕ್ರೀಡಾಕೂಟ, ತಿರುವಾದಿರ, ಹುಲಿವೇಷಧಾರಿಗಳ ಅಬ್ಬರದ ಕುಣಿತದೊಂದಿಗೆ ಓಣಂ ಕಳೆಯೇರಿತ್ತು. ಈ ಬಾರಿ ಈದ್ ಮಿಲಾದ್ ಹಾಗೂ ಓಣಂ ಹಬ್ಬ ಒಂದೇ ದಿನ ಆಗಮಿಸಿರುವುದು ವಿಶೇಷವಾಗಿತ್ತು.






