ಪಾಟ್ನಾ: 'ವಿವಿಧ ಭಾಷೆಗಳಲ್ಲಿ ಜನರು ಮಾತನಾಡುತ್ತಿದ್ದರೂ ಧರ್ಮವು ದೇಶವನ್ನು ಒಗ್ಗೂಡಿಸಿದೆ' ಎಂದು ಉಪ ರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಹೇಳಿದರು.
ಕೇಂದ್ರ ಸಂಸ್ಕೃತಿ ಸಚಿವಾಲಯದ ಸಹಯೋಗದೊಂದಿಗೆ ಸಾಹಿತ್ಯ ಅಕಾಡೆಮಿಯು ಭಾನುವಾರ ಇಲ್ಲಿ ಆಯೋಜಿಸಿದ್ದ 'ಉನ್ಮೇಶಾ ಅಂತರರಾಷ್ಟ್ರೀಯ ಸಾಹಿತ್ಯ ಉತ್ಸವ'ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
'ಇಡೀ ದೇಶಕ್ಕೆ ಅನ್ವಯವಾಗುವ ಸಾಮಾನ್ಯ ಭಾಷೆಯಿಲ್ಲದಿದ್ದರೂ ಭಾರತ ಹೇಗೆ ಒಗ್ಗಟ್ಟಿನಿಂದ ಇದೆ' ಎಂದು ಯುರೋಪ್ನ ಗಣ್ಯರೊಬ್ಬರು ಪ್ರಶ್ನಿಸಿದ್ದರು. ಅದಕ್ಕೆ ಉತ್ತರಿಸಿದ್ದ ನಾನು, ದೇಶದ ಜನರು ವಿವಿಧ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ. ಆದರೆ, ಧರ್ಮದ ಪರಿಕಲ್ಪನೆಯಲ್ಲಿ ಇಡೀ ದೇಶದ ಜನರು ಒಂದಾಗಿದ್ದಾರೆ ಎಂದು ತಿಳಿಸಿದ್ದೆನು' ಎಂದರು.
ಪ್ರಜಾಪ್ರಭುತ್ವ ಎಂಬುದು ಪಾಶ್ಚಿಮಾತ್ಯರ ಪರಿಕಲ್ಪನೆ ಎಂಬ ಅಭಿಪ್ರಾಯವನ್ನು ನಿರಾಕರಿಸಿದ ಅವರು, '2,500 ವರ್ಷಗಳ ಹಿಂದೆಯೇ ಬಿಹಾರದ ನೆಲದಲ್ಲಿ ಜನ್ಮತಾಳಿದ ಮೌರ್ಯ ಸಾಮ್ರಾಜ್ಯವು ಅತ್ಯಂತ ಪ್ರಾಚೀನ ಪ್ರಜಾಪ್ರಭುತ್ವವಾಗಿದೆ' ಎಂದು ಪ್ರತಿಪಾದಿಸಿದರು.




