ನವದೆಹಲಿ: ಟಿ.ವಿ. ವಾಹಿನಿಯೊಂದರ ಚರ್ಚೆಯಲ್ಲಿ ಬಿಜೆಪಿಯ ಮಾಧ್ಯಮ ವಕ್ತಾರರೊಬ್ಬರು 'ರಾಹುಲ್ ಗಾಂಧಿಯ ಎದೆಗೆ ಗುಂಡಿಕ್ಕಬೇಕು' ಎಂದಿರುವುದಕ್ಕೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
'ಪಕ್ಷದ ತಳಹಂತದ ಪದಾಧಿಕಾರಿಯೊಬ್ಬರು ನೀಡಿರುವ ಕ್ಷುಲ್ಲಕ ಹೇಳಿಕೆ ಇದು ಎಂದು ಅಸಡ್ಡೆ ತೋರಬಾರದು.
ಲೋಕಸಭೆಯ ವಿರೋಧ ಪಕ್ಷದ ನಾಯಕನನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ನೀಡಿರುವ ದ್ವೇಷದ ಹೇಳಿಕೆ ಇದಾಗಿದೆ' ಎಂದಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಅವರು ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.
'ಬಿಜೆಪಿಯ ಮಾಧ್ಯಮ ವಕ್ತಾರರಾಗಿ ಟಿ.ವಿ. ವಾಹಿನಿಗಳ ಚರ್ಚೆಯಲ್ಲಿ ಭಾಗವಹಿಸುವ ಎಬಿವಿಪಿಯ ಮಾಜಿ ಕಾರ್ಯಕರ್ತ ಪ್ರಿಂಟು ಮಹದೇವ್ ಹೇಳಿಕೆಯನ್ನು ನಿರ್ಲಕ್ಷ್ಯದಿಂದ ನೋಡಬಾರದು. ಅದು ಜೀವ ಬೆದರಿಕೆ' ಎಂದಿರುವ ವೇಣುಗೋಪಾಲ್, ಆತನ ವಿರುದ್ಧ ತ್ವರಿತವಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ರಾಜಕೀಯ ಭಿನ್ನಾಭಿಪ್ರಾಯಗಳನ್ನು ಸಾಂವಿಧಾನಿಕ ಚೌಕಟ್ಟಿನೊಳಗೆ ಪರಿಹರಿಸಿಕೊಳ್ಳಬೇಕು. ಆದರೆ ಬಿಜೆಪಿ ನಾಯಕರು ತಮ್ಮ ವಿರೋಧಿಗಳಿಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.




