ಕಾಸರಗೋಡು: ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ(ರಿ),ಕನ್ನಡ ಗ್ರಾಮ, ಕಾಸರಗೋಡು ಇದರ 35ನೇ ಸಂಸ್ಥಾಪನಾ ವರ್ಷಾಚರಣೆ ಹಾಗೂ ಕಾಸರಗೋಡು ಕನ್ನಡ ಗ್ರಾಮದ ಸಂಸ್ಥಾಪಕ ಶಿವರಾಮ ಕಾಸರಗೋಡು ಅವರ 60 ನೇ ವರ್ಷದ ಜನ್ಮದಿನೋತ್ಸವ- ಅಭಿನಂದನಾ ಕಾರ್ಯಕ್ರಮವು ಕಾಸರಗೋಡು ಕನ್ನಡ ಗ್ರಾಮದಲ್ಲಿ 2025 ನವಂಬರ್ 4 ರಂದು ಜರುಗಲಿದೆ. ಶಿವರಾಮ ಕಾಸರಗೋಡು ಅವರ 60ನೇ ವರ್ಷದ ಜನ್ಮದಿನೋತ್ಸವವನ್ನು ಗೋ ಸೇವೆಯ ಮೂಲಕ ಗುರುತಿಸಿಕೊಳ್ಳುವುದಕ್ಕಾಗಿ ಕಾಸರಗೋಡು ಕನ್ನಡ ಗ್ರಾಮದ ಆವರಣದಲ್ಲಿ 25 ಲಕ್ಷ ರೂ ವೆಚ್ಚದಲ್ಲಿ" ಕಾಸರಗೋಡು ಗೋ-ಕ್ಷೇತ್ರ-" ಗೋ-ಕುಟೀರ"ಕ್ಕೆ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಭೂಮಿ ಪೂಜೆ ನೆರವೇರಿಸುವುದರೊಂದಿಗೆ "ಗೋ-ಕ್ಷೇತ್ರ" "ಗೋ-ಕುಟೀರ"ದ ನಿರ್ಮಾಣಕ್ಕೆ ಚಾಲನೆ ನೀಡುವರು.
ಜಗಜ್ಜನನಿ ಗೋಮಾತೆಯ ಆಶೀರ್ವಾದ ಪಡೆಯಲು ಹಾಗೂ ದೇಸಿ ಗೋವುಗಳನ್ನು ಉಳಿಸಿ ಬೆಳೆಸುವುದಕ್ಕಾಗಿ ಕಾಸರಗೋಡು ಗೋ-ಕ್ಷೇತ್ರ- ಗೋ-ಕುಟೀರವನ್ನು ಒಂದು ಧಾರ್ಮಿಕ ಶ್ರದ್ದಾ ಕೇಂದ್ರವನ್ನಾಗಿ ರೂಪುಗೊಳಿಸುವುದಕ್ಕಾಗಿ ಸಾರ್ವಜನಿಕರು, ಗೋ ಭಕ್ತರ ಸಹಕಾರದಿಂದ ಬೃಹತ್ ಕಾರ್ಯ ಯೋಜನೆ ಕೈಗೊಳ್ಳಲಾಗಿದೆ. ಕಾಸರಗೋಡು ಪ್ರದೇಶದ ಪ್ರತಿಯೊಂದು ಮನೆಯಿಂದ ಗೋವುಗಳಿಗೆ ಭಕ್ತಿ ಪೂರ್ವಕವಾಗಿ ಮೇವು, ಗೋಗ್ರಾಸವನ್ನು ಭಕ್ತಿ ಶ್ರದ್ಧೆಯಿಂದ "ಹೊರೆಕಾಣಿಕೆ-ಹಸಿರು ವಾಣಿ" ಮಾದರಿಯಲ್ಲಿ ಸ್ವೀಕರಿಸಿ ಗೋಪ್ರಿಯರಿಗೆ ದಿನನಿತ್ಯ ಗೋ ಸೇವೆಯನ್ನು ಸಲ್ಲಿಸುವ ಅವಕಾಶ ಒದಗಿಸಿಕೊಡುವ ಯೋಜನೆಯನ್ನೂ ಹಮ್ಮಿಕೊಳ್ಳಲಾಗುವುದು. ದೀಪಾವಳಿ ಹಬ್ಬದಂದು ಗೋ ಪೂಜೆಯನ್ನು ಸಲ್ಲಿಸುವ ಮೂಲಕ ಗೋ ಸಂಭ್ರಮವನ್ನು ಶ್ರದ್ಧಾ ಪೂರ್ವಕವಾಗಿ ಆಚರಿಸಿ ಗೋ ಸಂಕಲ್ಪ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಪ್ರತಿ ಕುಟುಂಬದವರು ಒಂದು ದಿನ ಗೋಮಾತೆಯ ಸೇವೆ ಸಲ್ಲಿಸಿ ಅನುಗ್ರಹ ಪಡೆಯಲು, ತಮ್ಮ ಮನೆಗಳಲ್ಲಿ ನಡೆಯುವ ಶುಭ ಸಮಾರಂಭಗಳ ನಿಮಿತ್ತ ಗೋ-ಕ್ಷೇತ್ರ ಗೋ-ಕುಟೀರಕ್ಕೆ ಆಗಮಿಸಿ ಗೋ- ಸೇವೆಯೊಂದಿಗೆ ಕುಟುಂಬದವರು ಸಂಭ್ರಮವನ್ನು ಹಂಚಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಶಿವರಾಮ ಕಾಸರಗೋಡು ಹೇಳಿಕೆಯಲ್ಲಿ ತಿಳಿಸಿದ್ದಾರೆ.

