ನವದೆಹಲಿ: ಗಾಜಾದಲ್ಲಿ ಸಾವಿರಾರು ನಾಗರಿಕರ ಹತ್ಯೆಗೆ ಕಾರಣವಾದ ಭಯಾನಕ ದೌರ್ಜನ್ಯಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂಪೂರ್ಣ ಮೌನವನ್ನು ಕಾಯ್ದುಕೊಂಡಿದ್ದಾರೆ. ಇದು ತೀವ್ರ ನೈತಿಕ ಹೇಡಿತನ ಮತ್ತು ಭಾರತವು ಪ್ರತಿಪಾದಿಸಿದ ಎಲ್ಲ ತತ್ವಗಳಿಗೂ ಎಸಗುವ ದ್ರೋಹವಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
'ತಮ್ಮ ಆಪ್ತ ಸ್ನೇಹಿತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಸಮಾಧಾನಪಡಿಸುವ ಸಲುವಾಗಿ ನರೇಂದ್ರ ಮೋದಿ ಅವರು 'ಗಾಜಾಗೆ ಹೊಸ 20 ಅಂಶಗಳ ಯೋಜನೆ'ಯನ್ನು ಸ್ವಾಗತಿಸಿದ್ದಾರೆ. ಆದರೆ, ಈ ಯೋಜನೆಯ ಬಗ್ಗೆ ಮೂಲಭೂತ ಮತ್ತು ಗೊಂದಲದ ಪ್ರಶ್ನೆಗಳು ಹಾಗೆಯೇ ಉಳಿದಿವೆ' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
'ಗಾಜಾಗೆ ಹೊಸ 20 ಅಂಶಗಳ ಎಂಬ ಯೋಜನೆಯ ಪ್ರಕಾರ, ಪ್ರಸ್ತಾಪಿಸಲಾದ ಆಡಳಿತ ವ್ಯವಸ್ಥೆಯಲ್ಲಿ ಗಾಜಾದ ಜನರು ಸ್ವತಃ ಎಲ್ಲಿದ್ದಾರೆ?, ಪೂರ್ಣ ಪ್ರಮಾಣದ ಪ್ಯಾಲೆಸ್ಟೀನಿಯನ್ ರಾಷ್ಟ್ರ ಅಸ್ತಿತ್ವಕ್ಕೆ ಬರುವ ಮಾರ್ಗಸೂಚಿ ಎಲ್ಲಿದೆ?, ಅಮೆರಿಕ ಮತ್ತು ಇಸ್ರೇಲ್ ಪ್ಯಾಲೆಸ್ಟೀನಿಯನ್ ರಾಜ್ಯತ್ವವನ್ನು ಎಷ್ಟು ಕಾಲ ನಿರ್ಲಕ್ಷಿಸುತ್ತಲೇ ಇರುತ್ತವೆ... ಇದನ್ನು ಈಗಾಗಲೇ ವಿಶ್ವಸಂಸ್ಥೆಯ 157 ಸದಸ್ಯ ರಾಷ್ಟ್ರಗಳು ಗುರುತಿಸಿವೆ. ಕಳೆದ ಇಪ್ಪತ್ತು ತಿಂಗಳುಗಳಲ್ಲಿ ಗಾಜಾದಲ್ಲಿ ನಡೆದ ನರಮೇಧಕ್ಕೆ ಹೊಣೆಗಾರಿಕೆ ಎಲ್ಲಿದೆ' ಎಂದು ಜೈರಾಮ್ ರಮೇಶ್ ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ.




