ಪಾಲಕ್ಕಾಡ್: ಉತ್ತರ ಕೇರಳ ಜಿಲ್ಲೆಯ ಅಟ್ಟಪ್ಪಾಡಿ ಪ್ರದೇಶದ ಕಾಡಿನೊಳಗೆ ಗೌಪ್ಯವಾಗಿದ್ದ ರಾಜ್ಯದ ಅತಿ ದೊಡ್ಡ ಗಾಂಜಾ ತೋಟವನ್ನು ನಾಶಪಡಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್), ಜಿಲ್ಲಾ ಮಾದಕ ದ್ರವ್ಯ ನಿಗ್ರಹ ಘಟಕ ಮತ್ತು ಪುದೂರು ಪೊಲೀಸರು ಐದು ಗಂಟೆಗಳ ಕಾಲ ದಟ್ಟ ಕಾಡಿನ ಮಧ್ಯೆ ತೆರಳಿ ಸತ್ಯಕಲ್ಲುಮಲದ ತಪ್ಪಲಿನಲ್ಲಿದ್ದ ಗಾಂಜಾ ತೋಟವನ್ನು ನಾಶಪಡಿಸಿದ್ದಾರೆ.
ಸುಮಾರು 60 ಸೆಂಟ್ಸ್ ಜಮೀನಿನಲ್ಲಿದ್ದ 10,000 ಗಾಂಜಾ ಗಿಡಗಳನ್ನು ತಂಡವು ಪತ್ತೆಹಚ್ಚಿದ್ದು, ಆ ಗಿಡಗಳನ್ನು ಕಿತ್ತು ಸ್ಥಳದಲ್ಲೇ ನಾಶಪಡಿಸಿದ್ದಾರೆ.
ಅಟ್ಟಪ್ಪಾಡಿ ಬುಡಕಟ್ಟು ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಗಾಂಜಾ ಕೃಷಿ ಬೆಳೆದಿರುವ ಬಗ್ಗೆ ಕೇರಳ ಎಟಿಎಸ್ ಡಿಐಜಿ ಪುಟ್ಟ ವಿಮಲಾದಿತ್ಯ ಅವರಿಗೆ ಮಾಹಿತಿ ಸಿಕ್ಕಿತ್ತು. ಅವರು ಈ ಕುರಿತು ಪಾಲಕ್ಕಾಡ್ ಎಸ್ಪಿ ಅಜಿತ್ ಕುಮಾರ್ ಅವರಿಗೆ ಮಾಹಿತಿ ನೀಡಿದ್ದರು.
"ಇದು ಕೇರಳ ಪೊಲೀಸರು ನಡೆಸಿದ ಅತಿದೊಡ್ಡ ಗಾಂಜಾತೋಟಗಳ ಮೇಲಿನ ದಾಳಿಗಳಲ್ಲಿ ಒಂದಾಗಿದೆ. ಇದರ ಹಿಂದಿರುವ ವ್ಯವಹಾರ ಜಾಲಗಳ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ" ಎಂದು ಪೊಲೀಸರು ತಿಳಿಸಿದ್ದಾರೆ.




