ನವದೆಹಲಿ: 'ದೇಶದ ನ್ಯಾಯಾಲಯಗಳು ನೀಡುವ ತೀರ್ಪುಗಳು ಸ್ಪಷ್ಟವಾಗಿರಬೇಕು ಹಾಗೂ ಸಮತೋಲನದಿಂದ ಕೂಡಿರುವುದನ್ನು ಖಾತ್ರಿಪಡಿಸುವುದಕ್ಕಾಗಿ ಏಕರೂಪದ ರಾಷ್ಟ್ರೀಯ ನ್ಯಾಯಾಂಗ ನೀತಿಯೊಂದನ್ನು ರೂಪಿಸುವ ಅಗತ್ಯ ಇದೆ' ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಬುಧವಾರ ಪ್ರತಿಪಾದಿಸಿದರು.
ಸುಪ್ರೀಂ ಕೋರ್ಟ್ ವಕೀಲರ ಸಂಘ(ಎಸ್ಸಿಬಿಎ) ಹಮ್ಮಿಕೊಂಡಿದ್ದ ಸಂವಿಧಾನ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ನ್ಯಾಯಾಲಯಗಳು ಮನಸ್ಸಿಗೆ ಬಂದಂತೆ ತೀರ್ಪು ನೀಡುವುದನ್ನು ತಪ್ಪಿಸಲು ಇಂತಹ ನೀತಿಯಿಂದ ಸಾಧ್ಯವಾಗಲಿದೆ' ಎಂದು ಹೇಳಿದ್ದಾರೆ.
'ದೇಶದಲ್ಲಿ 25 ಹೈಕೋರ್ಟ್ಗಳು ಹಾಗೂ ಹಲವು ಪೀಠಗಳಿವೆ. ಇವು ಭಿನ್ನ ನಿಲುವುಗಳನ್ನು ತಳೆದು, ತೀರ್ಪು ನೀಡುವುದನ್ನು ತಡೆಯಬೇಕಿದೆ. ಈ ಕಾರಣಕ್ಕೆ, ರಾಷ್ಟ್ರೀಯ ನೀತಿಯೊಂದನ್ನು ರೂಪಿಸಲು ಈಗ ಕಾಲ ಪಕ್ವವಾಗಿದೆ' ಎಂದೂ ಅವರು ಹೇಳಿದರು.




