ಕೋಲ್ಕತ್ತ: ಎಸ್ಐಆರ್ ಸಂಬಂಧಿತ ಕೆಲಸದ ಹೊರೆಯನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಒ) ಪಶ್ಚಿಮ ಬಂಗಾಳದ ರಾಜ್ಯ ಚುನಾವಣಾ ಆಯೋಗದ ಕಚೇರಿ ಎದುರು ಪ್ರತಿಭಟಿಸಿದ್ದರ ಕುರಿತು ಕಳವಳ ವ್ಯಕ್ತಪಡಿಸಿ ಚುನಾವಣಾ ಆಯೋಗವು ಕೋಲ್ಕತ್ತ ಪೊಲೀಸ್ ಕಮಿಷನರ್ ಅವರಿಗೆ ಬುಧವಾರ ಪತ್ರ ಬರೆದಿದೆ.
ಪೊಲೀಸ್ ಕಮಿಷನರ್ ಮನೋಜ್ ಕುಮಾರ್ ವರ್ಮಾ ಅವರಿಗೆ ಪತ್ರ ಬರೆದಿರುವ ಆಯೋಗವು, 'ಇದೊಂದು ಗಂಭೀರವಾದ ಭದ್ರತಾ ವೈಫಲ್ಯ. ಮುಂದಿನ 48 ಗಂಟೆಗಳಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕು' ಎಂದಿದೆ. ಸುಮಾರು 30 ಗಂಟೆ ನಡೆದ ಪ್ರತಿಭಟನೆಯು ಮಂಗಳವಾರ ಸಂಜೆ ಮುಕ್ತಾಯಗೊಂಡಿತು.
'ರಾಜ್ಯ ಚುನಾವಣಾ ಅಧಿಕಾರಿ ಕಚೇರಿಗೆ ಸೂಕ್ತ ಭದ್ರೆತ ಒದಗಿಸಲಾಗಿಲ್ಲ. ಪರಿಸ್ಥಿತಿ ನಿಭಾಯಿಸಲು ಇರುವಷ್ಟು ಸಿಬ್ಬಂದಿ ಸಾಲದು. ಇದರಿಂದ ಕಚೇರಿಯಲ್ಲಿರುವ ಸಿಬ್ಬಂದಿಯ ಸುರಕ್ಷತೆಗೆ ಬೆದರಿಕೆ ಎದುರಾಗಿದೆ. ಸಿಬ್ಬಂದಿಗೆ ಕಚೇರಿಯಲ್ಲಿ ಮಾತ್ರವಲ್ಲದೆ ಅವರ ಮನೆಗಳಿಗೂ ಸೂಕ್ತ ಭದ್ರತೆ ಒದಗಿಸಬೇಕು. ಜೊತೆಗೆ ಅವರು ಮನೆಯಿಂದ ಕಚೇರಿ, ಕಚೇರಿಯಿಂದ ಮನೆಗೆ ಹೋಗುವಾಗಲೂ ಭದ್ರತೆ ನೀಡಬೇಕು' ಎಂದು ಆಯೋಗ ನಿರ್ದೇಶಿಸಿದೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಕಾರ್ಯದರ್ಶಿ ಮತ್ತು ಡಿಜಿಪಿಗೂ ಪತ್ರವನ್ನು ಆಯೋಗ ಕಳುಹಿಸಿದೆ.




