ನವದೆಹಲಿ: 'ಹಿಂದಿನ ತೀರ್ಪುಗಳಿಂದ ಅತೃಪ್ತರಾಗುವ ಕೆಲ ಕಕ್ಷಿದಾರರ ಆಣತಿಯಂತೆ, ಬೇರೆ ಪೀಠಗಳು ಸುಪ್ರೀಂ ಕೋರ್ಟ್ ತೀರ್ಪುಗಳನ್ನು ರದ್ದುಪಡಿಸುವ ಪ್ರವೃತ್ತಿ ಹೆಚ್ಚುತ್ತಿದೆ' ಎಂದು ಸುಪ್ರೀಂ ಕೋರ್ಟ್ ಬುಧವಾರ ಕಳವಳ ವ್ಯಕ್ತಪಡಿಸಿದೆ.
'ಸುಪ್ರೀಂ ಕೋರ್ಟ್ನ ಪೀಠವೊಂದು ನೀಡುವ ತೀರ್ಪನ್ನು ಅಂತಿಮ ಎಂಬುದಾಗಿ ಒಪ್ಪಿಕೊಳ್ಳುವುದು ಮುಖ್ಯ.
ಇದರಿಂದ ಕೊನೆಯಿಲ್ಲದೇ ನಡೆಯುವ ಕಾನೂನು ಪ್ರಕ್ರಿಯೆಗಳನ್ನು ತಡೆಯುವ ಜೊತೆಗೆ ನ್ಯಾಯಾಂಗದ ಮೇಲಿನ ಜನರ ನಂಬಿಕೆ ಕಾಯ್ದುಕೊಳ್ಳಲು ಸಾಧ್ಯವಾಗಲಿದೆ' ಎಂದು ನ್ಯಾಯಮೂರ್ತಿಗಳಾದ ದೀಪಾಂಕರ್ ದತ್ತ ಹಾಗೂ ಆಗಸ್ಟಿನ್ ಜಾರ್ಜ್ ಮಸೀಹ್ ಅವರು ಇದ್ದ ಪೀಠ ಹೇಳಿದೆ.
'ಯಾವುದೇ ಒಂದು ತೀರ್ಪಿನ ಮರುಪರಿಶೀಲನೆಗೆ ಅವಕಾಶ ನೀಡಿದಲ್ಲಿ, ಅದು ಸಂವಿಧಾನದ 141ನೇ ವಿಧಿಯ ಉದ್ಧೇಶವನ್ನೇ ವಿಫಲಗೊಳಿಸಿದಂತಾಗಲಿದೆ' ಎಂದು ಪೀಠ ಹೇಳಿದೆ.




