ನವದೆಹಲಿ: ಭಯೋತ್ಪಾದನೆ ವಿರುದ್ಧ ಹೋರಾಡಲು ಜಾಗತಿಕ ಮಟ್ಟದಲ್ಲಿ ವಿಧಾನವೊಂದನ್ನು ರೂಪಿಸಲು ಶ್ರಮಿಸುವುದು ಸೇರಿ ವಿವಿಧ ವಿಚಾರಗಳಲ್ಲಿ ಸಹಕಾರ ವೃದ್ಧಿಸುವ ಸಂಬಂಧ ಭಾರತ ಹಾಗೂ ಇಸ್ರೇಲ್ ಮಂಗಳವಾರ ಚರ್ಚಿಸಿದವು.
ವ್ಯಾಪಾರ, ಮೂಲಸೌಕರ್ಯ ಅಭಿವೃದ್ಧಿ, ಕೃಷಿ ಹಾಗೂ ಸಂವಹನ ಕ್ಷೇತ್ರದಲ್ಲಿನ ಸಹಕಾರ ಹೆಚ್ಚಿಸುವ ಬಗ್ಗೆ ಉಭಯ ದೇಶಗಳ ವಿದೇಶಾಂಗ ಸಚಿವರಾದ ಎಸ್.ಜೈಶಂಕರ್ ಹಾಗೂ ಗಿಡಿಯನ್ ಸಾರ್ ಮಾತುಕತೆ ನಡೆಸಿದರು.
ಬರುವ ದಿನಗಳಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭಾರತಕ್ಕೆ ಭೇಟಿ ನೀಡಲಿದ್ದು, ಅದಕ್ಕೆ ಪೂರಕವಾಗಿ ಉಭಯ ನಾಯಕರು ಹಲವು ವಿಚಾರಗಳ ಕುರಿತು ಚರ್ಚಿಸಿದರು ಎಂದು ತಿಳಿದುಬಂದಿದೆ.
'ಅಮೆರಿಕ ರೂಪಿಸಿರುವ ಕದನ ವಿರಾಮವು ನಿರೀಕ್ಷಿತ ಫಲ ನೀಡಿ, ಇಸ್ರೇಲ್ ಹಾಗೂ ಗಾಜಾ ಪಟ್ಟಿಯಲ್ಲಿ ಶಾಶ್ವತ ಶಾಂತಿ ನೆಲಸುವಂತಾಗಲಿ' ಎಂದು ಮಾತುಕತೆ ವೇಳೆ ಜೈಶಂಕರ್ ಆಶಿಸಿದರು ಎಂದೂ ಗೊತ್ತಾಗಿದೆ.
ಪ್ರಾದೇಶಿಕ ಸಂಪರ್ಕ ಹೆಚ್ಚಿಸುವ ಸಲುವಾಗಿ ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (ಐಎಂಇಸಿ) ಬಗ್ಗೆಯೂ ಚರ್ಚೆ ನಡೆಯಿತು ಎಂದು ಮೂಲಗಳು ತಿಳಿಸಿವೆ.
ಎಸ್.ಜೈಶಂಕರ್ ವಿದೇಶಾಂಗ ಸಚಿವಭಾರತ ಹಾಗೂ ಇಸ್ರೇಲ್ ಭಯೋತ್ಪಾದನೆಯ ಸವಾಲು ಎದುರಿಸುತ್ತಿವೆ. ಎಲ್ಲ ಬಗೆಯ ಭಯೋತ್ಪಾದನೆ ಮಟ್ಟ ಹಾಕಲು ಉಭಯ ದೇಶಗಳು ವಿಧಾನವೊಂದನ್ನು ರೂಪಿಸಬೇಕಿದೆ.




