ಮುಂಬೈ: ಕೇಂದ್ರ ಸರ್ಕಾರವು 'ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ'ಯನ್ನು (ಮನರೇಗಾ) ನಿಜಾರ್ಥದಲ್ಲಿ ಮುಗಿಸಿಹಾಕಿದೆ ಎಂದು ಸುಪ್ರೀಂ ಕೋರ್ಟ್ನ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಭಾನುವಾರ ಹೇಳಿದ್ದಾರೆ.
ಕೇಂದ್ರವು ಯೋಜನೆಯ ಹೆಸರನ್ನು ಬದಲಾಯಿಸಿರುವುದು ಮಾತ್ರವಲ್ಲದೆ, ಇಡೀ ಯೋಜನೆಯನ್ನೇ ಬದಲಾಯಿಸಿದೆ ಎಂದು ಅವರು ಲಾತೂರ್ನಲ್ಲಿ ಪ್ರತಿಕ್ರಿಯಿಸಿದ್ದಾರೆ.
'ಮನರೇಗಾ ಹಕ್ಕು ಆಧಾರಿತ ಯೋಜನೆಯಾಗಿದ್ದು, ಪ್ರತಿ ಗ್ರಾಮೀಣ ಕುಟುಂಬವು ಕನಿಷ್ಠ ವೇತನದಲ್ಲಿ ಕನಿಷ್ಠ 100 ದಿನಗಳ ಕಾಲ ಕೆಲಸ ಮಾಡುವ ಮೂಲಭೂತ ಹಕ್ಕನ್ನು ಪೂರೈಸಿತ್ತು. ಅಲ್ಲದೆ, ಸರ್ಕಾರದಿಂದ ಹಣವನ್ನೂ ಪಡೆಯುತ್ತಿತ್ತು. ಆದರೆ, ಈಗ ಕೇಂದ್ರ ಸರ್ಕಾರ ಅದನ್ನು ತೆಗೆದುಹಾಕಿದೆ. ಅದನ್ನು ಬಜೆಟ್ ಆಧಾರಿತ ಎಂದು ಹೇಳಿದೆ' ಎಂದು ಪ್ರಶಾಂತ್ ಭೂಷಣ್ ಹೇಳಿದ್ದಾರೆ.
ಕೇಂದ್ರ ಸರ್ಕಾರವು ಮನರೇಗಾದ ಹೆಸರನ್ನು ಬದಲಿಸಿ 'ವಿಕಸಿತ ಭಾರತ-ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) (ವಿಬಿ-ಜಿ ರಾಮ್ ಜಿ)ಯನ್ನು ಜಾರಿಗೆ ತಂದಿದೆ. ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದುಹಾಕಿರುವುದು ಮತ್ತು ರಾಜ್ಯಗಳ ಮೇಲೆ ಆರ್ಥಿಕ ಹೊರೆ ಹೇರುವುದರ ವಿರುದ್ಧ ವಿರೋಧ ಪಕ್ಷಗಳ ತೀವ್ರ ಪ್ರತಿಭಟನೆಯ ನಡುವೆಯೂ ಈ ಮಸೂದೆಯನ್ನು ಸಂಸತ್ತು ಅಂಗೀಕರಿಸಿತ್ತು.

