HEALTH TIPS

'ಭಾರತೀಯ ಉತ್ಪನ್ನಗಳ ಗುಣಮಟ್ಟವೇ ಮೂಲ ಮಂತ್ರವಾಗಲಿ,' ಮನ್ ಕೀ ಬಾತ್‌ನಲ್ಲಿ ಪ್ರಧಾನಿ ಮೋದಿ

ನವದೆಹಲಿ; ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ 2026ರ ಮೊದಲ 'ಮನ್ ಕೀ ಬಾತತ್' ಕಾರ್ಯಕ್ರಮದಲ್ಲಿ 2016ರ ನೆನಪುಗಳನ್ನು ಹಂಚಿಕೊಂಡು 'ಸ್ಟಾರ್ಟ್‌ಅಪ್ ಇಂಡಿಯಾ(Start-up India)'ದ ಆರಂಭದ ಕ್ಷಣಗಳನ್ನು ಸ್ಮರಿಸಿದರು.

ಕಳೆದೊಂದು ದಶಕದಲ್ಲಿ ಭಾರತದ ಸ್ಟಾರ್ಟ್‌ಅಪ್‌ ಪರಿಸರ ಹೇಗೆ ಉನ್ನತ ಮಟ್ಟಕ್ಕೆ ರೂಪಾಂತರಗೊಂಡಿದೆ ಎಂಬುದನ್ನು ಅವರು ವಿವರಿಸಿದ್ದಾರೆ.

'ಮನ್ ಕಿ ಬಾತ್' ಕಾರ್ಯಕ್ರಮದ 130ನೇ ಸಂಚಿಕೆಯಲ್ಲಿ ದೇಶವನ್ನುದ್ದೇಶಿ ಮಾತನಾಡಿದ ಪ್ರಧಾನಿ ಮೋದಿ, 2016ರಲ್ಲಿ ಸರ್ಕಾರ ಆರಂಭಿಸಿದ್ದ 'ಸ್ಟಾರ್ಟ್ ಅಪ್ ಇಂಡಿಯಾ' ಎಂಬ ಮಹತ್ವಾಕಾಂಕ್ಷಿ ಪಯಣ ಅನೇಕರಿಗೆ ಅರ್ಥವೇ ಆಗಿರಲಿಲ್ಲ. ಆದರೆ ಇಂದು ಭಾರತವು ವಿಶ್ವದಲ್ಲೇ ಮೂರನೇ ಅತಿದೊಡ್ಡ ಸ್ಟಾರ್ಟ್‌ಅಪ್​​ ಹಬ್​​ ಆಗಿ ಬೆಳೆದಿದೆ. ಯುವ ಉದ್ಯಮಿಗಳು ಕೃತಕ ಬುದ್ಧಿಮತ್ತೆ, ಬಾಹ್ಯಾಕಾಶ, ಅಣುಶಕ್ತಿ, ಸೆಮಿಕಂಡಕ್ಟರ್‌ಗಳು, ಮೊಬೈಲಿಟಿ, ಹಸಿರು ಹೈಡ್ರೋಜನ್ ಹಾಗೂ ಜೈವಿಕ ತಂತ್ರಜ್ಞಾನ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಜಗತ್ತು ಈಗ ಭಾರತದ ಆರ್ಥಿಕತೆಯ ಬೆಳವಣಿಗೆಯನ್ನು ಗಮನಿಸುತ್ತಿದೆ. ಹೀಗಾಗಿ ನಾವು ತಯಾರಿಸುವ ಪ್ರತಿಯೊಂದು ಉತ್ಪನ್ನದ ಗುಣಮಟ್ಟವನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಸಂಕಲ್ಪ ಮಾಡಬೇಕು. ಅದು ವಸ್ತ್ರೋದ್ಯಮವಾಗಲಿ, ತಂತ್ರಜ್ಞಾನವಾಗಲಿ, ಎಲೆಕ್ಟ್ರಾನಿಕ್ಸ್ ಅಥವಾ ಪ್ಯಾಕೇಜಿಂಗ್ ಆಗಲಿ, ಭಾರತೀಯ ಉತ್ಪನ್ನ ಎಂದರೆ 'ಅತ್ಯುತ್ತಮ ಗುಣಮಟ್ಟ' ಎಂಬ ಅರ್ಥ ಮೂಡಿಬರಬೇಕು. ಗುಣಮಟ್ಟವನ್ನೇ ನಮ್ಮ ಮಾನದಂಡವಾಗಿಸೋಣ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಮತದಾನ

ದೇಶದ ಜನತೆಗೆ ಗಣರಾಜ್ಯೋತ್ಸವ ಮತ್ತು ರಾಷ್ಟ್ರೀಯ ಮತದಾರರ ದಿನಾಚರಣೆಯ ಶುಭಾಶಯ ತಿಳಿಸಿದ ಮೋದಿಯವರು, ಸಂವಿಧಾನ ಮತ್ತು ಅದನ್ನು ರಚಿಸಿದವರಿಗೆ ಗೌರವ ಸಲ್ಲಿಸಿದರು. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಯುವಕನೂ ಮತದಾರನಾಗಿ ನೋಂದಾಯಿಸಿಕೊಳ್ಳಬೇಕು, ಅಲ್ಲದೇ ಯುವ ನಾಗರಿಕರು ಮತದಾರರಾಗುವ ಕ್ಷಣವನ್ನು ಸಮುದಾಯಗಳಲ್ಲಿ ಸಂಭ್ರಮಿಸುವಂತೆ ಸಲಹೆ ನೀಡಿದರು. ಚುನಾವಣಾ ಸಿಬ್ಬಂದಿಗೆ ಧನ್ಯವಾದ ತಿಳಿಸಿದ ಅವರು, ಮತದಾನವು ಸಂವಿಧಾನಾತ್ಮಕ ಕರ್ತವ್ಯವಾಗಿದ್ದು, ಪ್ರಜಾಪ್ರಭುತ್ವವನ್ನು ಬಲಪಡಿಸುವ ಮಾರ್ಗವಾಗಿದೆ ಎಂದರು.

ನದಿಗಳು, ಜಲಾಶಯಗಳು ಮತ್ತು ಸಾರ್ವಜನಿಕ ಭಾಗವಹಿಕೆ

ಉತ್ತರ ಪ್ರದೇಶದ ಅಜಂಘರ್ ಕುರಿತು ಮಾತನಾಡಿದ ಮೋದಿ, ಸ್ಥಳೀಯರು ತಮ್ಸಾ ನದಿಯಲ್ಲಿನ ಹೋಳು ಮತ್ತು ಕಸದ ತೆರವುಗೊಳಿಸಿ, ತೀರಗಳಲ್ಲಿ ಮರ ನೆಡುವ ಮೂಲಕ ಪುನರುಜ್ಜೀವನಗೊಳಿಸಲು ಕಾರ್ಯ ಕೈಗೊಂಡಿರುವುದನ್ನು ಉಲ್ಲೇಖಿಸಿದರು. ಆಂಧ್ರಪ್ರದೇಶದ ಬರಪೀಡಿತ ಅನಂತಪುರದಲ್ಲಿ *ಅನಂತ ನೀರು ಸಂರಕ್ಷಣಂ* ಯೋಜನೆಯಡಿ 10ಕ್ಕೂ ಹೆಚ್ಚು ಜಲಾಶಯಗಳನ್ನು ಪುನಶ್ಚೇತನಗೊಳಿಸಿ, 7,000ಕ್ಕೂ ಹೆಚ್ಚು ಮರಗಳನ್ನು ನೆಟ್ಟು, ಸ್ಥಳೀಯ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು.

ಮಲೇಶಿಯಾದ ಭಾರತೀಯ ವಲಸಿಗರ ಬಗ್ಗೆ ಪ್ರಶಂಸೆ

ಮಲೇಶಿಯಾದಲ್ಲಿರುವ ಭಾರತೀಯ ವಲಸಿಗರನ್ನು ಮೋದಿ ಪ್ರಶಂಸಿಸಿದ್ದಾರೆ. ಅಲ್ಲಿ 500ಕ್ಕೂ ಹೆಚ್ಚು ತಮಿಳು ಶಾಲೆಗಳಿದ್ದು, ಇತರ ಭಾರತೀಯ ಭಾಷೆಗಳ ಮೇಲೆಯೂ ಆಸಕ್ತಿ ಹೆಚ್ಚುತ್ತಿದೆ ಎಂದು ಹೇಳಿದರು. ಅಲ್ಲದೇ ಭಾರತ ಮತ್ತು ಮಲೇಶಿಯಾ ನಡುವಿನ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವಲ್ಲಿ 'ಮಲೇಶಿಯಾ ಇಂಡಿಯಾ ಹೆರಿಟೇಜ್ ಸೊಸೈಟಿ' ಮಹತ್ವದ ಪಾತ್ರ ವಹಿಸುತ್ತಿದೆ ಎಂದರು.

ಸಾವಿರಾರು ಮರಗಳನ್ನು ನೆಟ್ಟ ಬೆನೋಯ್ ದಾಸ್​

ಪಶ್ಚಿಮ ಬಂಗಾಳದ ಕೂಚ್ ಬಿಹಾರ್ ಜಿಲ್ಲೆಯ ನಿವಾಸಿ ಬೆನೋಯ್ ದಾಸ್​ ಅವರ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಅವರು ತಮ್ಮ ಸ್ವಂತ ಶ್ರಮದಿಂದಲೇ ಜಿಲ್ಲೆಯನ್ನು ಹಸಿರುಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಬೆನೋಯ್ ದಾಸ್ ಅವರು ಸಾವಿರಾರು ಮರಗಳನ್ನು ಸ್ವಂತ ಖರ್ಚಿನಿಂದಲೇ ನೆಟ್ಟು, ಆರೈಕೆ ಮಾಡಿದ್ದಾರೆ ಎಂದರು. ಇಷ್ಟೇ ಅಲ್ಲದೇ ಪನ್ನಾದ ಅರಣ್ಯ ರಕ್ಷಕನೊಬ್ಬ 125ಕ್ಕೂ ಹೆಚ್ಚು ಔಷಧೀಯ ಸಸ್ಯಗಳನ್ನು ನೆಟ್ಟಿರುವುದನ್ನು ಶ್ಲಾಘಿಸಿದ ಪ್ರಧಾನಿ, 'ಏಕ್ ಪೇಡ್ ಮಾ ಕೆ ನಾಮ್' ಅಭಿಯಾನವು ದೇಶಾದ್ಯಂತ 200 ಕೋಟಿ ಮರಗಳ ನೆಡುವ ಹಂತ ದಾಟಿದೆ ಎಂದು ಹೇಳಿದರು.

ಮಿಲ್ಲೆಟ್‌ನಿಂದ ಆರೋಗ್ಯ, ಆದಾಯ ಅಭಿವೃದ್ಧಿ

ಮಿಲ್ಲೆಟ್‌ ಕುರಿತು ಮಾತನಾಡಿದ ಮೋದಿ, ಅಂತಾರಾಷ್ಟ್ರೀಯ ಮಿಲ್ಲೆಟ್ ವರ್ಷ ಘೋಷಣೆಯಾದ ಮೂರು ವರ್ಷಗಳ ಬಳಿಕವೂ ಅದರ ಬಗ್ಗೆ ಜನರ ಆಸಕ್ತಿ ಕಡಿಮೆಯಾಗಿಲ್ಲ ಎಂದರು. ತಮಿಳುನಾಡಿನ ಮಹಿಳಾ ರೈತರು ನಡೆಸುತ್ತಿರುವ ಮಿಲ್ಲೆಟ್ ಪ್ರೊಸೆಸಿಂಗ್ ಘಟಕ, ರಾಜಸ್ಥಾನದ ರೈತರು ತಯಾರಿಸುವ ಬಜ್ರಾ ಲಡ್ಡುಗಳು ಮತ್ತು ದೇವಾಲಯಗಳಲ್ಲಿ ಪ್ರಸಾದವಾಗಿ ಮಿಲ್ಲೆಟ್ ಬಳಕೆಯಾಗುತ್ತಿರುವ ಉದಾಹರಣೆಗಳನ್ನು ಅವರು ನೀಡಿದರು. ಮಿಲ್ಲೆಟ್‌ಗಳು ರೈತರ ಆದಾಯ ಹೆಚ್ಚಿಸುವುದರ ಜೊತೆಗೆ ಸಾರ್ವಜನಿಕ ಆರೋಗ್ಯವನ್ನು ಉತ್ತಮಗೊಳಿಸುತ್ತವೆ ಎಂದು ಪ್ರಧಾನಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries