ಪಣಜಿ: ನೌಕಾಪಡೆಯ ಮಾಜಿ ಮುಖ್ಯಸ್ಥ ಅಡ್ಮಿರಲ್ ಅರುಣ್ ಪ್ರಕಾಶ್ ಅವರಿಗೆ ನೋಟಿಸ್ ನೀಡಿರುವ ಚುನಾವಣಾ ಆಯೋಗ, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕಣೆ(ಎಸ್ಐಆರ್)ಯ ಭಾಗವಾಗಿ ತಮ್ಮ ಗುರುತನ್ನು ದೃಢಪಡಿಸಲು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ನಿವೃತ್ತಿಯ ಬಳಿಕ ಗೋವಾದಲ್ಲಿ ನೆಲಸಿರುವ ಅರುಣ್ ಅವರ ಕುರಿತು 2002ರ ಮತದಾರರ ಪಟ್ಟಿಯಲ್ಲಿನ ಮಾಹಿತಿ ಮತ್ತು ಈಗಿನ ಮಾಹಿತಿ ತಾಳೆಯಾಗುತ್ತಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅರುಣ್ ಅವರ ಪಿಂಚಣಿ ಪಾವತಿ ಆದೇಶ ಮತ್ತು ಜೀವಿತ ಪ್ರಮಾಣಪತ್ರವು ಸರ್ಕಾರಿ ದತ್ತಾಂಶಗಳಲ್ಲಿ ಲಭ್ಯವಿರುವುದರಿಂದ ಎಸ್ಐಆರ್ ತಂಡಕ್ಕೆ ಇನ್ನೇನು ಬೇಕು' ಎಂದು 'ಎಕ್ಸ್' ಬಳಕೆದಾರರು ಪ್ರಶ್ನಿಸಿದ್ದಾರೆ.
'ನಿವೃತ್ತಿಯಾಗಿ 20 ವರ್ಷಗಳಾಗಿದ್ದು, ನಾನು ಯಾವುದೇ ಸೌಲಭ್ಯವನ್ನು ಕೇಳಿಲ್ಲ ಮತ್ತು ಪಡೆದಿಲ್ಲ. ನಾನು ಮತ್ತು ನನ್ನ ಪತ್ನಿ ಎಸ್ಐಆರ್ ಅರ್ಜಿಗಳನ್ನು ಭರ್ತಿ ಮಾಡಿದ್ದೇವೆ. 2026ರ ಗೋವಾ ಮತದಾರರ ಕರಡು ಪಟ್ಟಿಯಲ್ಲಿ ನಮ್ಮ ಹೆಸರಿದೆ' ಎಂದು ಅರುಣ್ ಅವರು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
'ಸರಿಯಾದ ಮಾಹಿತಿಗಳು ದಾಖಲಾಗದಿದ್ದರೆ ಎಸ್ಐಆರ್ ನಮೂನೆ ಪರಿಷ್ಕರಿಸಬೇಕು. ಬಿಎಲ್ಒಗಳು ನಮ್ಮನ್ನು ಮೂರು ಬಾರಿ ಭೇಟಿ ಮಾಡಿದ್ದಾರೆ. ಅವರು ಹಚ್ಚಿನ ಮಾಹಿತಿಯನ್ನು ಕೇಳಬಹುದಿತ್ತು. 82 ವಯಸ್ಸಿನ ನನಗೆ ಮತ್ತು 78 ವಯಸ್ಸಿನ ನನ್ನ ಪತ್ನಿಗೆ 18 ಕಿ.ಮೀ. ದೂರದಲ್ಲಿನ ವಿಚಾರಣಾ ಕೇಂದ್ರಕ್ಕೆ ಬೇರೆ ಬೇರೆ ದಿನಗಳಲ್ಲಿ ಹಾಜರಾಗಲು ಸೂಚಿಸಲಾಗಿದೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
'ಅರುಣ್ ಅವರ ಗಣತಿ ನಮೂನೆಯನ್ನು ಪರಿಶೀಲಿಸುತ್ತೇವೆ. ಅಧಿಕಾರಿಗಳು ಅವರನ್ನು ಭೇಟಿ ಮಾಡಲಿದ್ದಾರೆ' ಎಂದು ಗೋವಾ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಅಗತ್ಯ ಮಾಹಿತಿ ನೀಡಿಲ್ಲ: ಆಯೋಗ
ಅಡ್ಮಿರಲ್ ಅರುಣ್ ಪ್ರಕಾಶ್ ಅವರಿಗೆ ನೋಟಿಸ್ ನೀಡಿರುವ ಬಗ್ಗೆ ಸ್ಪಷ್ಟನೆ ನೀಡಿರುವ ಭಾರತೀಯ ಚುನಾವಣಾ ಆಯೋಗ 'ಹಿಂದಿನ ಎಸ್ಐಆರ್ಗೆ ಸಂಬಂಧಿಸಿದ ಕಡ್ಡಾಯ ಮಾಹಿತಿಗಳನ್ನು ಅರುಣ್ ಅವರ ಅರ್ಜಿ ಹೊಂದಿರಲಿಲ್ಲ' ಎಂದು ತಿಳಿಸಿದೆ. ಕೋರ್ಟಾಲಿಂ ವಿಧಾನಸಭಾ ಕ್ಷೇತ್ರದ ಬೂತ್ ಮಟ್ಟದ ಅಧಿಕಾರಿಯು ಅರುಣ್ ಅವರಿಂದ ಭರ್ತಿ ಮಾಡಿದ ಅರ್ಜಿಯನ್ನು ಸಂಗ್ರಹಿಸಿದ್ದಾರೆ. ಆದರೆ ಅವರ ಅರ್ಜಿಯಲ್ಲಿ ಮತದಾರರ ಹೆಸರು. ಎಪಿಕ್ ಸಂಖ್ಯೆ ಸಂಬಂಧಿಕರ ಹೆಸರು ವಿಧಾನಸಭಾ ಕ್ಷೇತ್ರದ ಹೆಸರು ಮತ್ತು ಸಂಖ್ಯೆ ಸೇರಿದಂತೆ ಹಿಂದಿನ ಎಸ್ಐಆರ್ಗೆ ಸಂಬಂಧಿಸಿದ ಅಗತ್ಯ ಮಾಹಿತಿಗಳು ಇರಲಿಲ್ಲ ಎಂದು ತಿಳಿಸಿದ್ದಾರೆ. ಇಂಥ ಸಮಸ್ಯೆಗಳಾದಾಗ ಸ್ವಯಂಚಾಲಿತವಾಗಿ ನೋಟಿಸ್ ಜಾರಿಯಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

