ರುದ್ರಪ್ರಯಾಗ್: ಚಳಿಗಾಲದ ಕಾರಣದಿಂದ ಆರು ತಿಂಗಳುಗಳ ಕಾಲ ಬಾಗಿಲು ಮುಚ್ಚಿರುವ ಕೇದಾರನಾಥ ದೇಗುಲದ ಬಾಗಿಲನ್ನು ಏಪ್ರಿಲ್ 22ರಂದು ತೆರೆಯಲಾಗುತ್ತದೆ ಎಂದು ದೇವಾಲಯದ ಸಮಿತಿ ಭಾನುವಾರ ತಿಳಿಸಿದೆ.
12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕೇದಾರನಾಥ ದೇಗುಲದ ಬಾಗಿಲು ಏಪ್ರಿಲ್ 22ರಂದು ಬೆಳಿಗ್ಗೆ 8 ಗಂಟೆಗೆ ತೆರೆಯಲಿದೆ. ಈ ಮೂಲಕ ಚಾರ್ಧಾಮ್ ಯಾತ್ರೆ ಆರಂಭವಾಗಲಿದೆ.
ಚಾರ್ದಾಮ್ ಕ್ಷೇತ್ರಗಳಾದ ಕೇದಾರನಾಥ ಏ.22ರಂದು ಬಾಗಿಲು ತೆರೆದರೆ, ಬದರಿನಾಥ ದೇಗುಲ ಏ.23ರಂದು ಬಾಗಿಲು ತೆರೆಯಲಿದೆ. ಗಂಗೋತ್ರಿ ಮತ್ತು ಯಮುನೋತ್ರಿ ದೇಗುಲಗಳು ಏ.19ರಂದು ಅಕ್ಷಯ ತೃತೀಯದಂದು ಬಾಗಿಲು ತೆರೆಯಲಿವೆ.
ಚಳಿಗಾಲದಲ್ಲಿ ದೇಗುಲ ಹಿಮದಿಂದ ಆವೃತವಾಗುವ ಕಾರಣ ನವೆಂಬರ್ನಲ್ಲಿ ಕೇದಾರನಾಥ ದೇವಾಲಯದ ಬಾಗಿಲುಗಳನ್ನು ಮುಚ್ಚಲಾಗುತ್ತದೆ. ದೇಗುಲದ ಬಾಗಿಲುಗಳನ್ನು ಮುಚ್ಚುವ ಮುನ್ನ ಅಲ್ಲಿರುವ ಶಿವನ ವಿಗ್ರಹವನ್ನು ಪಲ್ಲಕ್ಕಿ ಮೂಲಕ ಹೊರತರಲಾಗುತ್ತದೆ. ಚಳಿಗಾಲ ಮುಗಿಯುವವರೆಗೆ ರುದ್ರಪ್ರಯಾಗದಲ್ಲಿನ ಉಖಿಮಠದ ಓಂಕಾರೇಶ್ವರ ದೇಗುಲದಲ್ಲಿ ವಿಗ್ರಹವನ್ನಿಟ್ಟು ಪೂಜಿಸಲಾಗುತ್ತದೆ.

