ಪಟ್ನಾ: 'ಬಜೆಟ್ ಅಧಿವೇಶನದ ವೇಳೆ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡಲು ಆಗಮಿಸುತ್ತಿದ್ದ ವೇಳೆ ಅಸಹ್ಯಕರವಾಗಿ ನಿಂದಿಸಿದ ವಿರೋಧ ಪಕ್ಷದ 40ರಿಂದ 50 ಮಂದಿ ಸಂಸದರು ನಂತರ ಸ್ಪೀಕರ್ ಓಂ ಬಿರ್ಲಾ ಅವರ ಕೊಠಡಿಗೂ ನುಗ್ಗಿದರು' ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಆರೋಪಿಸಿದ್ದಾರೆ.
ಬಿಹಾರದ ರಾಜಧಾನಿ ಪಟ್ನಾದ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 'ವಿರೋಧ ಪಕ್ಷದ ಸಂಸದರು ಸಮಸ್ಯೆ ಸೃಷ್ಟಿಸಲು ಸಿದ್ಧರಾಗಿದ್ದರು. ಸದನಕ್ಕೆ ಬಾರದಿರುವುದು ಸೂಕ್ತ ನಿರ್ಧಾರವೆಂದು ಪ್ರಧಾನಿ ಅವರಿಗೂ ತಿಳಿಸಿದೆವು. ಸ್ಪೀಕರ್ ಕೊಠಡಿಯಲ್ಲಿ ಈ ನಿರ್ಧಾರ ತೆಗೆದುಕೊಂಡ ವೇಳೆ ನಾನು ಅವರ ಕಚೇರಿಯಲ್ಲಿಯೇ ಇದ್ದೆ' ಎಂದು ಹೇಳಿದ್ದಾರೆ.
ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲೆ ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಮಾತನಾಡಲಿಲ್ಲವೇಕೆ ಎಂಬ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, 'ನಾವು ಕೇಂದ್ರದಲ್ಲಿ ಅಧಿಕಾರದಲ್ಲಿದ್ದು, ಪೂರ್ಣ ಬೆಂಬಲವನ್ನು ಹೊಂದಿದ್ದೇವೆ. ನಾವು ಯಾರಿಗೂ ಹೆದರುವುದಿಲ್ಲ. ಮಾರ್ಷಲ್ಗಳನ್ನು ಬಳಸಿಕೊಂಡು, ಸದನವನ್ನು ಸುಗಮವಾಗಿ ನಡೆಸುವ ಸಾಮರ್ಥ್ಯ ಹೊಂದಿದ್ದೆವು. ಆದರೆ, ಆ ರೀತಿ ಮಾಡಲು ನಾವು ಸಿದ್ಧರಿರಲಿಲ್ಲ. ಹೀಗಾಗಿ ಸಮಸ್ಯೆಗೆ ವಿವೇಚನೆ ಬಳಸಿ ಪರಿಹಾರ ಕಂಡುಕೊಂಡೆವು' ಎಂದು ವಿವರಿಸಿದ್ದಾರೆ.
'ಈ ಕಾರಣದಿಂದಲೇ ಪ್ರಧಾನಿ ಅವರು ಲೋಕಸಭೆಗೆ ಗೈರಾದರು. ರಾಜ್ಯಸಭೆಯಲ್ಲಿ ಅವರು ಸುದೀರ್ಘವಾಗಿ ಮಾತನಾಡಿದರು. ಸರ್ಕಾರವು ಅಗತ್ಯ ಬೆಂಬಲ ಹೊಂದಿದ್ದು, ವಂದನಾ ನಿರ್ಣಯವನ್ನು ಧ್ವನಿಮತದ ಮೂಲಕ ಅಂಗೀಕರಿಸಿದ್ದೇವೆ' ಎಂದು ರಿಜಿಜು ಈ ವೇಳೆ ಉಲ್ಲೇಖಿಸಿದರು.
ಸುದ್ದಿಯಲ್ಲಿರಲು ವಾಕ್ಚಾತುರ್ಯ ಬಳಕೆ: 'ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸದಾ ಸುದ್ದಿಯಲ್ಲಿರಲು ತಮ್ಮ ವಾಕ್ಚಾತುರ್ಯ ಬಳಸುತ್ತಿದ್ದಾರೆ. ಇದು ಯಾವುದೇ ಪರಿಣಾಮ ಬೀರುವುದಿಲ್ಲ ಎಂಬುದನ್ನು ಸಾಬೀತುಪಡಿಸಿದೆ' ಎಂದು ರಿಜಿಜು ಆರೋಪಿಸಿದ್ದಾರೆ.
'ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶವು ಸಾಕಷ್ಟು ಅಭಿವೃದ್ಧಿ ಕಂಡಿದೆ. ಜನರು ಕಾಂಗ್ರೆಸ್ ಮೇಲೆ ಎಂದಿಗೂ ಭರವಸೆ ಇಡಲು ಸಾಧ್ಯವಿಲ್ಲ. 60 ವರ್ಷಗಳ ಆಡಳಿತದಲ್ಲಿ ದೇಶವನ್ನು ಅವರು ಸಾಕಷ್ಟು ದುರ್ಬಲಗೊಳಿಸಿದ್ದಾರೆ' ಎಂದು ಹೇಳಿದ್ದಾರೆ.

