ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆಯಲ್ಲಿ(ಎಸ್ಐಆರ್) ಚುನಾವಣಾ ಅಧಿಕಾರಿಗಳು ತಮ್ಮ ಅಧೀನ ಅಧಿಕಾರಿಗಳಿಗೆ ವಾಟ್ಸ್ಆಯಪ್ ಮೂಲಕ ನಿರ್ದೇಶನಗಳನ್ನು ನೀಡುವ ಮೂಲಕ ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಉಲ್ಲಂಘಿಸುತ್ತಿದ್ದಾರೆ' ಎಂದು ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಬುಧವಾರ ಆಯೋಗದ ವಿರುದ್ಧ ಹರಿಯಾಯ್ದರು.
ವಾಟ್ಸ್ಆಯಪ್ ಗ್ರೂಪ್ನಲ್ಲಿ ನಡೆದಿರುವ ಕೆಲವು ಸಂದೇಶಗಳ (ಚಾಟ್ಸ್) ವಿನಿಯಮದ ಸ್ಕ್ರೀನ್ ಶಾಟ್ಗಳನ್ನು ತಮ್ಮ 'ಎಕ್ಸ್' ಖಾತೆಯಲ್ಲಿ ಹಂಚಿಕೊಂಡಿರುವ ಅಭಿಷೇಕ್, 'ಪಾರದರ್ಶಕತೆ, ಸೂಕ್ತ ಪ್ರಕ್ರಿಯೆ ಮತ್ತು ಅಧಿಕೃತ ಸಂವಹನ ಮಾರ್ಗಗಳನ್ನು ಅನುಸರಿಸಬೇಕೆಂದು ಸುಪ್ರೀಂ ಕೋರ್ಟ್ ಪದೇ ಪದೇ ಒತ್ತಿಹೇಳಿದೆ' ಎಂದು ಹೇಳಿದರು.
ಎಸ್ಐಆರ್ನ ವಿಶೇಷ ಅಧಿಕಾರಿ ಸಿ.ಮುರುಗನ್ ಅವರು ನೇರವಾಗಿ ತಮ್ಮ ಅಧೀನ ಅಧಿಕಾರಿಗಳಿಗೆ(ಮೈಕ್ರೊ ಅಬ್ಸರ್ವರ್ಸ್) ಸೂಚನೆ ಕಳುಹಿಸಿರುವುದನ್ನು ಅಭಿಷೇಕ್ ಪ್ರಶ್ನಿಸಿದರು.
'ಶಾಸನಬದ್ಧ ಕಾರ್ಯವಿಧಾನವನ್ನು ಏಕೆ ಬೈಪಾಸ್ ಮಾಡಲಾಗುತ್ತಿದೆ ಮತ್ತು ಯಾರ ಸೂಚನೆಗಳ ಅಡಿಯಲ್ಲಿ ಇದನ್ನು ಮಾಡಲಾಗುತ್ತಿದೆ' ಎಂದು ಅಭಿಷೇಕ್ ಪ್ರಶ್ನಿಸಿದರು.

