ಎಡರಂಗ ಸಂಯೋಜಿತ ಅಖಿಲ ಭಾರತ ವಿದ್ಯಾರ್ಥಿಗಳ ಸಂಘವು (ಎಐಎಸ್ಎ) ಕಾರ್ಯಕ್ರಮವನ್ನು ಆಯೋಜಿಸಿತ್ತು.
ಹಬೀಬ್ ಕಲಾ ವಿಭಾಗದ ಗೇಟ್ ಸಂಖ್ಯೆ 4ರ ಬಳಿ ಮಾತನಾಡುತ್ತಿದ್ದಾಗ ಗೋಡೆಯ ಹಿಂದಿನಿಂದ ಅವರತ್ತ ನೀರು ತುಂಬಿದ್ದ ಬಕೆಟ್ ಎಸೆಯಲಾಗಿತ್ತು.
ಬಕೆಟ್ ನೇರವಾಗಿ ಹಬೀಮ್ ಮೇಲೆ ಬಿದ್ದಿರಲಿಲ್ಲ, ಆದರೆ ನೀರು ಅವರ ಮೈಮೇಲೆ ಬಿದ್ದಿತ್ತು. ಸ್ವಲ್ಪ ಹೊತ್ತು ತನ್ನ ಭಾಷಣವನ್ನು ನಿಲ್ಲಿಸಿದ್ದ ಅವರು ಬಳಿಕ ಅದನ್ನು ಮುಂದುವರಿಸಿದ್ದರು. ಘಟನೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
'ನಾನು ಇತಿಹಾಸದ ಬಗ್ಗೆ ಮತ್ತು ಅದನ್ನು ಹೇಗೆ ಮರುಬರೆಯಲಾಗುತ್ತಿದೆ ಎಂಬ ಕುರಿತು ಮಾತನಾಡುತ್ತಿದ್ದಾಗ ನೀರು ತುಂಬಿದ ಬಕೆಟ್ ಎಲ್ಲಿಂದಲೋ ಬಿದ್ದಿತ್ತು' ಎಂದು ಸುದ್ದಿಸಂಸ್ಥೆಗೆ ತಿಳಿಸಿದ ಹಬೀಬ್, ಅದರಲ್ಲಿ ನೀರು ಇತ್ತು, ಆದರೆ ಅದು ಏನನ್ನಾದರೂ, ಕಲ್ಲುಗಳನ್ನೂ ಸಹ ಒಳಗೊಂಡಿರಬಹುದಿತ್ತು ಎಂದು ಹೇಳಿದರು.
ಇದೊಂದು ಆತಂಕಕಾರಿ ಘಟನೆ ಎಂದು ಬಣ್ಣಿಸಿದ ಅವರು, 'ವಿವಿಗಳು ವೈವಿಧ್ಯಮಯ ಧ್ವನಿಗಳ ತಾಣಗಳಾಗಿವೆ ಮತ್ತು ಅವುಗಳನ್ನು ಗೌರವಿಸಬೇಕು. ನಾನು ಹೇಳುವುದನ್ನು ಯಾರಾದರೂ ಒಪ್ಪದಿದ್ದರೆ ಅವರು ಅದರ ಬಗ್ಗೆ ಸಂವಾದವನ್ನು ನಡೆಸಬಹುದು. ಖಂಡಿತವಾಗಿಯೂ ಈ ರೀತಿಯಲ್ಲಲ್ಲ' ಎಂದರು.
'ಸಮಾಜದಲ್ಲಿ ಮತ್ತು ವಿಶ್ವದ್ಯಾಲಯದಲ್ಲಿ ಜಾತಿ' ಕುರಿತು ಹಬೀಬ್ ಭಾಷಣದೊಂದಿಗೆ ಕಾರ್ಯಕ್ರಮವು ಆರಂಭಗೊಂಡಿತ್ತು.
ಹಬೀಬ್ ಭಾಷಣ ಮಾಡುತ್ತಿರುವಾಗ ಎಬಿವಿಪಿ ಕಾರ್ಯಕರ್ತರು ವೇದಿಕೆಯ ಮೇಲೆ ದಾಳಿ ನಡೆಸಿದ್ದರು ಹಾಗೂ ಹಿಂಸಾತ್ಮಕ ಮತ್ತು ಬೆದರಿಕೆಯ ಘೋಷಣೆಗಳನ್ನು ಕೂಗುತ್ತಿದ್ದರು ಎಂದು ಎಐಎಸ್ಎ ಆರೋಪಿಸಿದೆ.
ಅದು ಘಟನೆಯನ್ನು 'ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಶೋಷಿತರ ಧ್ವನಿಗಳಿಗೆ ಮೀಸಲಾಗಿರುವ ವೇದಿಕೆಯ ಮೇಲಿನ ಉದ್ದೇಶಪೂರ್ವಕ, ಸಂಘಟಿತ ದಾಳಿ' ಎಂದು ಬಣ್ಣಿಸಿದೆ.
ಆರೋಪಗಳನ್ನು 'ಆಧಾರರಹಿತ ಮತ್ತು ಸುಳ್ಳು' ಎಂದು ತಿರಸ್ಕರಿಸಿರುವ ಎಬಿವಿಪಿ, ಎಡಪಂಥೀಯ ವಿದ್ಯಾರ್ಥಿ ಗುಂಪುಗಳು 'ದಾರಿ ತಪ್ಪಿಸುವ ಮತ್ತು ವಿಕೃತ ನಿರೂಪಣೆಗಳನ್ನು' ಹರಡುತ್ತಿವೆ ಎಂದು ಆರೋಪಿಸಿದೆ.
ಘಟನೆಯ ಕುರಿತು ತಾವುದೇ ಔಪಚಾರಿಕ ದೂರು ಬಂದಿಲ್ಲ, ಆದರೆ ಈ ವಿಷಯವನ್ನು ಪರಿಶೀಲಿಸುವುದಾಗಿ ದಿಲ್ಲಿ ವಿವಿಯ ಹೆಸರು ಹೇಳಿಕೊಳ್ಳಲು ಬಯಸದ ಅಧಿಕಾರಿಗಳು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

