ನವದೆಹಲಿ: ಪ್ರಧಾನಿ ನರೇಂದ್ರಮೋದಿ ಬುಧವಾರ ಗೂಗಲ್ ಸಿಇಒ ಸುಂದರ್ ಪಿಚೈ ಅವರನ್ನು ಭೇಟಿ ಮಾಡಿದ್ದು, ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಭಾರತ ಮಾಡುತ್ತಿರುವ ಕೆಲಸ ಮತ್ತು ಟೆಕ್ ದೈತ್ಯ ಸಂಸ್ಥೆಯು ಈ ಸಂಬಂಧ ಭಾರತದ ವಿದ್ಯಾರ್ಥಿಗಳು ಹಾಗೂ ವೃತ್ತಿಪರರ ಜೊತೆ ಹೇಗೆ ಕಾರ್ಯನಿರ್ವಹಿಸಲಿದೆ ಎಂಬ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ವರದಿ ತಿಳಿಸಿದೆ.
ನವದೆಹಲಿಯ ಭಾರತ ಮಂಟಪದಲ್ಲಿ ಆಯೋಜಿಸಲಾಗಿರುವ 'ಕೃತಕ ಬುದ್ಧಿಮತ್ತೆ ಇಂಪ್ಯಾಕ್ಟ್ ಶೃಂಗ'ದಲ್ಲಿ ಭಾಗವಹಿಸಲು ಪಿಚೈ ಭಾರತಕ್ಕೆ ಆಗಮಿಸಿದ್ದಾರೆ.
'ಎಐ ಇಂಪ್ಯಾಕ್ಟ್ ಶೃಂಗದ ಸಂದರ್ಭದಲ್ಲಿ ಸುಂದರ್ ಪಿಚೈ ಅವರ ಭೇಟಿಯಿಂದ ಸಂತಸಗೊಡಿದ್ದೇನೆ. ಎಐ ಕ್ಷೇತ್ರದಲ್ಲಿ ಭಾರತ ಮಾಡುತ್ತಿರುವ ಕೆಲಸ ಮತ್ತು ಈ ವಲಯದಲ್ಲಿ ನಮ್ಮ ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ವೃತ್ತಿಪರರ ಜೊತೆ ಗೂಗಲ್ ಹೇಗೆ ಕೆಲಸ ಮಾಡಲಿದೆ ಎಂಬ ಬಗ್ಗೆ ಚರ್ಚಿಸಲಾಯಿತು'ಎಂದು ಮೋದಿ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
600ಕ್ಕೂ ಹೆಚ್ಚು ಉನ್ನತ ಸಾಮರ್ಥ್ಯದ ಸ್ಟಾರ್ಟ ಪ್ಗಳು, ಅಂತರರಾಷ್ಟ್ರೀಯ ಎಐ ಪರಿಸರ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿರುವ 13 ದೇಶಗಳ ಪೆವಿಲಿಯನ್ ಒಳಗೊಂಡಿರುವ ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್ಪೋಗೆ ಬುಧವಾರ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದರು.
20 ರಾಜ್ಯಗಳ ಪ್ರತಿನಿಧಿಗಳು, 60 ಮಂದಿ ಸಚಿವರು ಮತ್ತು 500 ಮಂದಿ ಜಾಗತಿಕ ಎಐ ವಲಯದ ಮುಖ್ಯಸ್ಥರು ಭಾಗವಹಿಸುತ್ತಿದ್ದಾರೆ.

