ಬೇಪೂರ್: ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಬೇಪೂರ್ ಬಂದರಿನ ಅಭಿವೃದ್ಧಿಗೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಲೋಕೋಪಯೋಗಿ ಸಚಿವ ಮುಹಮ್ಮದ್ ರಿಯಾಜ್ ಬುಧವಾರ ಫೇಸ್ಬುಕ್ನಲ್ಲಿ ಇದನ್ನು ಘೋಷಿಸಿದ್ದಾರೆ.
ಬೇಪೂರ್ ಅನ್ನು ಸಂಪೂರ್ಣ ಬಂದರು ನಗರವನ್ನಾಗಿ ಪರಿವರ್ತಿಸುವ ಗುರಿಯೊಂದಿಗೆ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ. ಈ ಯೋಜನೆಯು ಸಾಕಾರಗೊಂಡ ಬಳಿಕ , ಇಡೀ ಪ್ರದೇಶವು ದೊಡ್ಡ ಪ್ರಮಾಣದ ಆರ್ಥಿಕ ಮತ್ತು ಸಾಮಾಜಿಕ ಸಮೃದ್ಧಿಯನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ಸಚಿವರು ಹೇಳಿದರು.
ಯೋಜನೆಯ ಮೂಲಕ ಅನೇಕ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಇದಲ್ಲದೆ, ಈ ನಿರ್ಧಾರವು ಪ್ರಸ್ತುತ ಬಂದರು ವಲಯದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಭಿವೃದ್ಧಿ ಚಟುವಟಿಕೆಗಳ ಕುರಿತು ಎಲ್ಲಾ ವರ್ಗದ ಜನರೊಂದಿಗೆ ಚರ್ಚೆಗಳನ್ನು ನಡೆಸಲಾಗುವುದು ಮತ್ತು ಅವರ ಸಲಹೆಗಳ ಆಧಾರದ ಮೇಲೆ ಮುಂದಿನ ಕ್ರಮಗಳನ್ನು ಜಾರಿಗೆ ತರಲಾಗುವುದು ಎಂದು ಬಂದರು ಸಚಿವರೊಂದಿಗೆ ನಡೆದ ಚರ್ಚೆಯಲ್ಲಿ ನಿರ್ಧರಿಸಲಾಗಿದೆ.
ರಾಜ್ಯದ ಬಹುದಿನಗಳ ಬಂದರು ಅಭಿವೃದ್ಧಿಯ ಕನಸನ್ನು ನನಸಾಗಿಸುವಲ್ಲಿ ಬೆಂಬಲ ನೀಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಬಂದರು ಸಚಿವ ವಿ.ಎನ್. ವಾಸವನ್ ಮತ್ತು ಇತರ ಸಂಪುಟ ಸದಸ್ಯರಿಗೆ ಸಚಿವ ಮುಹಮ್ಮದ್ ರಿಯಾಜ್ ಕೃತಜ್ಞತೆಗಳನ್ನು ಸಲ್ಲಿಸಿದರು.

