ಶಿಲ್ಲಾಂಗ್: ಪತಿಗೆ ಪತ್ನಿಯೇ ಸದನದಲ್ಲಿ ಪ್ರಶ್ನೆ ಕೇಳಿದ ಅಪರೂಪದ ಘಟನೆಗೆ ಮೇಘಾಲಯ ವಿಧಾನಸಭೆ ಸಾಕ್ಷಿಯಾಯಿತು. ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ ಅವರಿಗೆ ಅವರ ಪತ್ನಿ ಹಾಗೂ ಗಂಬೆಗ್ರೆ ಕ್ಷೇತ್ರದ ಶಾಸಕಿ ಮೆಹ್ತಾಬ್ ಚಾಂದೀ ಪೂರಕ ಪ್ರಶ್ನೆ ಕೇಳಿದ ಸಂದರ್ಭ ಸದನದಲ್ಲಿ ತಿಳಿ ಮಂದಹಾಸ ಮೂಡಿತು.
ಘಟನೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಾಜ್ಯದಲ್ಲಿನ ಕಾಲೇಜುಗಳ ಸ್ಥಿತಿ ಮತ್ತು ಪಶು ಸಂಗೋಪನೆ ಇಲಾಖೆಯ ಯೋಜನೆಗಳ ಕುರಿತು ಮೆಹ್ತಾಬ್ ಚಾಂದೀ ಪ್ರಶ್ನೆ ಎತ್ತಿದರು.
"ರಾಜ್ಯದಲ್ಲಿ ಪಶು ಸಂಗೋಪನೆ, ಮೀನುಗಾರಿಕೆ ಮತ್ತು ಹೈನುಗಾರಿಕೆಗೆ ಸಂಬಂಧಿಸಿದ ಕಾಲೇಜುಗಳ ಸ್ಥಾಪನೆ ಕುರಿತು ಸರ್ಕಾರ ಯಾವ ಕ್ರಮ ಕೈಗೊಂಡಿದೆ?" ಎಂದು ಅವರು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ,
"ರಾಜ್ಯದಲ್ಲಿ ತರಬೇತಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಅವುಗಳ ನಿಖರ ಅಂಕಿ-ಅಂಶಗಳು ಮತ್ತು ಸ್ಥಳಗಳ ವಿವರ ಈ ಕ್ಷಣದಲ್ಲಿ ಲಭ್ಯವಿಲ್ಲ. ಪಶು ಸಂಗೋಪನೆ, ಮೀನುಗಾರಿಕೆ ಹಾಗೂ ಹೈನುಗಾರಿಕೆಗೆ ತಲಾ ಒಂದೊಂದು ಕಾಲೇಜು ಸ್ಥಾಪಿಸಲು 2022ರಲ್ಲಿ ಸಚಿವ ಸಂಪುಟ ತೀರ್ಮಾನ ಕೈಗೊಂಡಿದೆ," ಎಂದು ತಿಳಿಸಿದರು.
ಪೂರಕ ಪ್ರಶ್ನೆ ಕೇಳಿದ ಮೆಹ್ತಾಬ್ ಚಾಂದೀ,
"ಪಶು ಸಂಗೋಪನೆ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಇದೆ. ಇಲಾಖೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆಯೇ? ಮಾನವ ಸಂಪನ್ಮೂಲ ಕೊರತೆಯನ್ನು ಭರ್ತಿ ಮಾಡಲು ಯಾವ ಕ್ರಮ ಕೈಗೊಳ್ಳಲಾಗಿದೆ?" ಎಂದು ಕೇಳಿದರು.
ಮುಖ್ಯಮಂತ್ರಿ ಪ್ರತಿಕ್ರಿಯಿಸಿ,
"ಪಶು ಸಂಗೋಪನೆ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಇರುವುದು ನಿಜ. ಇದು ಕಳವಳಕಾರಿ ಸಂಗತಿ. ಖಾಲಿ ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು," ಎಂದು ಭರವಸೆ ನೀಡಿದರು.
ಸದನದಲ್ಲಿ ಈ ಸಂವಾದ ನಡೆಯುವ ವೇಳೆ ಸದಸ್ಯರ ನಡುವೆ ಹಾಸ್ಯಮಯ ವಾತಾವರಣ ನಿರ್ಮಾಣವಾಗಿತ್ತು. ಪತಿ-ಪತ್ನಿಯರಾದ ಸಂಗ್ಮಾ ಮತ್ತು ಮೆಹ್ತಾಬ್ ಚಾಂದೀ ಈ ಹಿಂದೆಯೂ ನೀತಿ ವಿಷಯಗಳ ಕುರಿತು ವಿಧಾನಸಭೆಯಲ್ಲಿ ಚರ್ಚೆ ನಡೆಸಿ ಗಮನ ಸೆಳೆದಿದ್ದರು.

