ಮಂಜೇಶ್ವರ: ಮೀಯಪದವು ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭ ಶಾಲಾ ರಾಮಕೃಷ್ಣ ರಾವ್ ಸಭಾಂಗಣದಲ್ಲಿ ಜರಗಿತು. ಶಾಲಾ ಸಂಚಾಲಕಿ ಎಂ. ರಾಜೇಶ್ವರಿ ಎಸ್. ರಾವ್ ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಶಾಲಾ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ರಂಗೇರಿದವು.ಅಪರಾಹ್ನ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ಜೋರ್ಜ್ ಕ್ರಾಸ್ತಾ ಸಿ.ಎಚ್. ವಹಿಸಿ ಶುಭ ಹಾರೈಸಿದರು. ಮಂಗಳೂರು ಸಂತ ಅಲೋಶಿಯಸ್ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಹಾಗೂ ವಿಜ್ಞಾನ ವಿಭಾಗದ ನಿರ್ದೇಶಕ ಡಾ. ನಾರಾಯಣ ಭಟ್ ಮರುವಳ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ ವಿದ್ಯಾಭ್ಯಾಸದಿಂದ ಮಕ್ಕಳು ಉತ್ತಮ ಜೀವನವನ್ನು ರೂಪಿಸಿಕೊಳ್ಳುವ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಶಾಲಾ ನಿವೃತ್ತ ಅಧ್ಯಾಪಕ ಜೋಕಿ ಮೊಂತೆರೋ ಅವರನ್ನು ಗಣ್ಯರ ಸಮಕ್ಷಮದಲ್ಲಿ ಗೌರವಿಸಲಾಯಿತು. ಸನ್ಮಾನಿತರ ಪರಿಚಯವನ್ನು ಶಾಲಾ ಅಧ್ಯಾಪಕ ಹರೀಶ್ ಸುಲಾಯ ಒಡ್ಡಂಬೆಟ್ಟು ವಾಚಿಸಿದರು. ಸನ್ಮಾನಿತರು ತಮ್ಮ ಶಾಲಾ ವೃತ್ತಿ ಜೀವನದ ಅನುಭವಗಳನ್ನು ಹಂಚಿಕೊಂಡರು.
ಮಂಜೇಶ್ವರ ಬಿ.ಆರ್.ಸಿ ಯೋಜನಾಧಿಕಾರಿ ರಾಜಗೋಪಾಲ್ ಪಿ, ಶಾಲಾ ಸಂಚಾಲಕಿ ರಾಜೇಶ್ವರಿ ಎಸ್. ರಾವ್, ಪಿಟಿಎ ಅಧ್ಯಕ್ಷ ಜಗದೀಶ್ ಸಿ. ಶೆಟ್ಟಿಗಾರ್ ಹಾಗೂ ಎಂ.ಪಿ.ಟಿ.ಎ. ಅಧ್ಯಕ್ಷೆ ಆಶ್ಲೇಷ ಜಿ ರಾವ್ ಶುಭ ಹಾರೈಸಿದರು. ವಾರ್ಷಿಕೋತ್ಸವದ ಅಂಗವಾಗಿ ನಡೆಸಿದ ಸ್ಪರ್ಧೆಗಳ ಹಾಗೂ ಪ್ರತೀ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಳೆದ ವರ್ಷ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ದಿ.ಗೋಪಾಲಕೃಷ್ಣ ರಾವ್ ಸ್ಮರಣಾರ್ಥ ಹಾಗೂ ದಿ.ದುಗ್ಗಣ್ಣ ಭಟ್ ಸ್ಮರಣಾರ್ಥ ನೀಡುವ ಧನಸಹಾಯವನ್ನು ನೀಡಲಾಯಿತು. ಅಧ್ಯಾಪಕಿ ದಿವ್ಯಶ್ರೀ ಕೆ. ನಡೆಸಿಕೊಟ್ಟರು.
ಶಾಲಾ ಆಡಳಿತ ಸಲಹೆಗಾರ ಶ್ರೀಧರ ರಾವ್ ಆರ್.ಎಮ್. ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ರಾಮಚಂದ್ರ ಕೆ.ಎಂ. ವಂದಿಸಿದರು. ಕೃಷ್ಣ ಶರ್ಮ ಕೆ ನಿರೂಪಿಸಿದರು. ಮುಖ್ಯೋಪಾಧ್ಯಾಯರಾದ ಅರವಿಂದಾಕ್ಷ ಭಂಡಾರಿ ವಾರ್ಷಿಕ ವರದಿ ಮಂಡಿಸಿದರು. ಬಳಿಕ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂದುವರಿದವು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಕ್ಕಳಿಂದ ಸಿಬಿಐ ಸೇತುರಾಮ್ ಅಯ್ಯರ್ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು. ಸಾಂಸ್ಕೃತಿಕ ಕಾರ್ಯಕ್ರಮವನ್ನು ವಿಘ್ನೇಶ ಎಸ್. ಹಾಗೂ ವಿದ್ಯಾರ್ಥಿಗಳು ನಿರ್ವಹಿಸಿದರು.

.jpg)
