ದೇಶಾಭಿಮಾನಿ ಡಿಜಿಟಲ್ ಆವೃತ್ತಿಯ ಸಂಯೋಜಕ ಸಂಪಾದಕ ಸಜನ್ ಎವುಗೆನ್ ಅವರು TNMಗೆ ನೀಡಿದ ಮಾಹಿತಿಯಂತೆ, ಫೆಬ್ರವರಿ 1ರಂದು ಕೇಂದ್ರ ಬಜೆಟ್ ಪ್ರಸ್ತುತಿಯ ದಿನವೇ ತಮ್ಮ ಇನ್ಸ್ಟಾಗ್ರಾಮ್ ಖಾತೆ ನಿಷ್ಕ್ರಿಯಗೊಂಡಿದೆ. ಕಳೆದ ಹತ್ತು ದಿನಗಳಿಂದ ಖಾತೆ ಮರುಸ್ಥಾಪನೆಗಾಗಿ ಮೆಟಾ ಜೊತೆ ಸಂಪರ್ಕ ಸಾಧಿಸಲು ಪ್ರಯತ್ನಿಸಿದರೂ ಸ್ಪಷ್ಟ ಪ್ರತಿಕ್ರಿಯೆ ಸಿಗಲಿಲ್ಲ ಎಂದು ತಿಳಿಸಿದ್ದಾರೆ. ಕಮ್ಯೂನಿಟಿ ಗೈಡ್ ಲೈನ್ಸ್ ಉಲ್ಲಂಘನೆ ಕುರಿತಂತೆ ಯಾವುದೇ ಅಧಿಕೃತ ನೋಟಿಸ್ ಬಂದಿಲ್ಲ ಎಂದು ಅವರು ಹೇಳಿದ್ದಾರೆ.
ಬಿಜೆಪಿ ಹಾಗೂ RSS ನೀತಿಗಳ ವಿರುದ್ಧ ಕಠಿಣ ನಿಲುವು ಮತ್ತು ಕೇಂದ್ರ ಸರ್ಕಾರದ ನೀತಿಗಳ ಟೀಕಾತ್ಮಕ ವರದಿಗಳೇ ಈ ಕ್ರಮಕ್ಕೆ ಕಾರಣವಾಗಿರಬಹುದು ಎಂಬ ಅನುಮಾನವನ್ನು ದೇಶಾಭಿಮಾನಿ ಪತ್ರಿಕೆ ವ್ಯಕ್ತಪಡಿಸಿದೆ. ಕೇರಳ ರಾಜ್ಯದ ನಿರ್ಲಕ್ಷ್ಯ, ಜನವಿರೋಧಿ ನೀತಿಗಳು ಸೇರಿದಂತೆ ಹಲವು ವಿಷಯಗಳನ್ನು ನಿಯಮಿತವಾಗಿ ಪೋಸ್ಟ್ ಮಾಡಲಾಗುತ್ತಿತ್ತು ಎಂದು ಪತ್ರಿಕೆ ಹೇಳಿದೆ.
ಇನ್ನೊಂದೆಡೆ, 'ನೋ ಕ್ಯಾಪ್' ಸಂಸ್ಥೆಯೂ ಯಾವುದೇ ನಿರ್ದಿಷ್ಟ ಕಾರಣವಿಲ್ಲದೇ ಖಾತೆ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಫೇಸ್ಬುಕ್ ನಲ್ಲಿ ತಿಳಿಸಿದೆ. ಕಾರ್ಯನಿರ್ವಾಹಕ ಸಂಪಾದಕ ಅಲಿ ಹೈದರ್ ಹೇಳುವಂತೆ, ಆರಂಭದಲ್ಲಿ ಕಮ್ಯೂನಿಟಿ ಗೈಡ್ ಲೈನ್ಸ್ ಉಲ್ಲಂಘನೆ ಎಂಬ ಸಾಮಾನ್ಯ ಸೂಚನೆ ಬಂದಿತ್ತು; ಆದರೆ ಯಾವ ಪೋಸ್ಟ್ಗೆ ಸಂಬಂಧಿಸಿದೆ ಎಂಬುದನ್ನು ಮೆಟಾ ಸ್ಪಷ್ಟಪಡಿಸಿಲ್ಲ. ಮೇಲ್ಮನವಿಗೆ ಪ್ರತಿಕ್ರಿಯೆಯಾಗಿ "ಶಾಶ್ವತ ಅಮಾನತು" ಎಂಬ ಉತ್ತರ ಮಾತ್ರ ಲಭಿಸಿದೆ ಎಂದು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ RSS ವಿರುದ್ಧ ಟೀಕಾತ್ಮಕ ವಿಷಯಗಳು ಹಾಗೂ ಎಪ್ಸ್ಟೀನ್ ಫೈಲ್ ಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ಹಂಚಲಾಗಿತ್ತು ಎಂದು 'ನೋ ಕ್ಯಾಪ್' ಪ್ರತಿನಿಧಿಗಳು ಹೇಳಿದ್ದಾರೆ. ನಿಷೇಧದ ನಿಖರ ಕಾರಣ ತಿಳಿದಿಲ್ಲದಿದ್ದರೂ ಇತ್ತೀಚಿನ ಪೋಸ್ಟ್ ಗಳೇ ಇದಕ್ಕೆ ಕಾರಣವಾಗಿರಬಹುದು ಎಂದು ಅವರು ಹೇಳಿದ್ದಾರೆ.
ನಿಷೇಧದ ನಂತರ ಫೆಬ್ರವರಿ 9ರಂದು ಖಾತೆ ಮರುಸ್ಥಾಪನೆಗಾಗಿ ಮನವಿ ಸಲ್ಲಿಸಿದರೂ ಇನ್ನೂ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ. ಈ ನಡುವೆ ಹೊಸ ಪುಟವನ್ನು ಆರಂಭಿಸಿರುವುದಾಗಿ ದೇಶಾಭಿಮಾನಿ ತಿಳಿಸಿದೆ. ಇದೇ ಅವಧಿಯಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸಿದ ಹಲವಾರು ಇನ್ಸ್ಟಾಗ್ರಾಮ್ ಪುಟಗಳನ್ನೂ ನಿಷ್ಕ್ರಿಯಗೊಳಿಸಲಾಗಿದೆ ಎಂಬ ವರದಿಗಳು ಲಭ್ಯವಾಗಿವೆ.

