ಕಾಸರಗೋಡು: ಪತ್ನಿಗೆ ಇರಿದು ಕೊಲೆಗೆ ಯತ್ನಿಸಿದ ಪತಿ, ನಂತರ ನೇಣಿಗೆ ಶರಣಾದ ಘಟನೆ ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಕಡಪ್ಪುರ ಬಾವನಗರದಲ್ಲಿ ನಡೆದಿದೆ. ಇಲ್ಲಿನ ನಿವಾಸಿ, ಇಬ್ರಾಹಿಂ(55) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದವನು. ಈತನ ಇರಿತದಿಂದ ಗಾಯಗೊಂಡಿರುವ ಪತ್ನಿ ಮರಿಯಾ ಅವರನ್ನು ಗಂಭೀರಾವಸ್ಥೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಬ್ರಾಹಿಂ ಹಾಗೂ ಮರಿಯಾ ಅವರ ಮಧ್ಯೆ ವಾಗ್ವಾದ ನಡೆದಿದ್ದು, ಈ ಮಧ್ಯೆ ಇಬ್ರಾಹಿಂ ಕತ್ತಿಯಿಂದ ಮರಿಯಾ ಅವರ ತಲೆಗೆ ಬಲವಾಗಿ ಕಡಿದಿದ್ದನು. ಅತಿಯಾದ ರಕ್ತಸ್ರಾವದಿಂದ ಬೊಬ್ಬಿಡುತ್ತಿದ್ದಾಗ ಆಸುಪಾಸಿನವರು ಸ್ಥಳಕ್ಕಾಮಿಸುತ್ತಿದ್ದಂತೆ, ಇಬ್ರಾಹಿಂ ಪರಾರಿಯಾಗಿದ್ದನು. ತಕ್ಷಣ ಮರಿಯಾ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ನಾಪತ್ತೆಯಾಗಿದ್ದ ಇಬ್ರಾಹಿಂಗಾಗಿ ಹುಡುಕಾಡುವ ಮಧ್ಯೆ, ಈತನ ಮೃತದೇಹ ಮನೆ ಸನಿಹದ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಹೊಸದುರ್ಗ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

