ಗಾಜಿಯಾಬಾದ್: ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಅಪ್ರಾಪ್ತ ವಯಸ್ಸಿನ ಮೂವರು ಸಹೋದರಿಯರು, ಕೊರಿಯಾ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿದ್ದರೆಂದು ಅವರ ತಂದೆ ಮೊಬೈಲ್ ಫೋನ್ ಅನ್ನು ಕಸಿದುಕೊಂಡಿದ್ದರು. ಇದರಿಂದ ಮೂವರೂ ಖಿನ್ನತೆಗೆ ಒಳಗಾಗಿದ್ದರು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.
ಮೊಬೈಲ್ ಫೋನ್ ಕಸಿದುಕೊಂಡಿದ್ದರಿಂದ ಬಾಲಕಿಯರಿಗೆ ಆನ್ಲೈನ್ ಗೇಮ್ ಆಡಲು ಮತ್ತು ಕೊರಿಯಾ ಸ್ನೇಹಿತರ ಜೊತೆ ಮಾತನಾಡಲು ಸಾಧ್ಯವಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಕಸಿದುಕೊಂಡಿದ್ದ ಮೊಬೈಲ್ ಅನ್ನು ಅವರ ತಂದೆ ಮಾರಾಟ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಆತ್ಮಹತ್ಯೆಗೂ ಮುನ್ನ ಬಾಲಕಿಯರು ತಾಯಿಯ ಫೋನ್ ತೆಗೆದುಕೊಂಡಿದ್ದರು. ಆದರೆ, ಅದರಲ್ಲಿ ಕೊರಿಯಾ ಆಯಪ್ ಬಳಕೆಗೆ ಅವಕಾಶವಿರಲಿಲ್ಲ. ಇದರಿಂದ ನೊಂದಿದ್ದರು ಎಂದು ಗೊತ್ತಾಗಿದೆ ಎಂದು ತಿಳಿಸಿದ್ದಾರೆ.
'ಘಟನಾ ಸ್ಥಳಕ್ಕೆ ತೆರಳಿದ್ದ ವಿಧಿವಿಜ್ಞಾನ ತಂಡವು ಬೆರಳಚ್ಚು, ಮರಣಪತ್ರವನ್ನು ಪ್ರಯೋಗಾಲಕ್ಕೆ ಕೊಂಡೊಯ್ದಿದೆ. ಈ ಕುರಿತ ವರದಿಯು ಇನ್ನಷ್ಟೇ ಬರಬೇಕಿದೆ' ಎಂದು ಡಿಸಿಪಿ ನಿಮಿಷಾ ಪಾಟೀಲ್ ತಿಳಿಸಿದ್ದಾರೆ.
'ಬಾಲಕಿಯರ ತಂದೆಯಿಂದ ಮೊಬೈಲ್ ಖರೀದಿ ಮಾಡಿದವರಿಗಾಗಿ ಸೈಬರ್ ಅಪರಾಧ ತನಿಖಾ ತಂಡವು ಶೋಧ ನಡೆಸುತ್ತಿದೆ' ಎಂದು ಪಾಟೀಲ್ ತಿಳಿಸಿದ್ದಾರೆ.
ನಿಶಿಕಾ (16), ಪ್ರಾಚಿ (14) ಮತ್ತು ಪಾಖಿ (12) ಇತ್ತೀಚೆಗೆ ಒಂಬತ್ತನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.

