ಡೆಹ್ರಾಡೂನ್: ಉತ್ತರಾಖಂಡದ ಜೋಶಿಮಠದಲ್ಲಿರುವ ಜ್ಯೋತಿಷ ಪೀಠದ ಸ್ವಾಮೀಜಿ ಅವಿಮುಕ್ತೇಶ್ವರಾನಂದ ಧರ್ಮ ಸಂರಕ್ಷಣೆಗಾಗಿ 2 ಲಕ್ಷಕ್ಕೂ ಹೆಚ್ಚು ಸದಸ್ಯರ ಸೇನೆ ಸ್ಥಾಪಿಸುವ ಯೋಜನೆ ಘೋಷಿಸಿದ್ದಾರೆ.
ಪ್ರಸ್ತುತ ಉತ್ತರ ಪ್ರದೇಶದ ವಾರಣಸಿಯಲ್ಲಿ (Varanasi) ಇರುವ ಅವರು, ಈ ಸೇನೆಯು ಸಾಂಪ್ರದಾಯಿಕ ಹಾಗೂ ಆಧುನಿಕ ಆಯುಧಗಳಿಂದ ಸಜ್ಜುಗೊಂಡಿದ್ದು, ಗೋಸಂರಕ್ಷಣೆ ಮತ್ತು ಹಿಂದೂ ಧರ್ಮ ರಕ್ಷಣೆಗೆ ಕೆಲಸ ಮಾಡಲಿದೆ ಎಂದು ಹೇಳಿದ್ದಾರೆ.ಈ ಸೇನೆಯಲ್ಲಿ ಒಟ್ಟು 2,18,000 ಸೈನಿಕರು ಇರಲಿದ್ದು, ಜಾತಿ ಭೇದವಿಲ್ಲದೆ ಎಲ್ಲ ಸದಸ್ಯರನ್ನು ಒಳಗೊಂಡಿರುತ್ತದೆ ಎಂದು ಅವರು ತಿಳಿಸಿದ್ದಾರೆ. ಪುರುಷರು, ಮಹಿಳೆಯರು ಹಾಗೂ ತೃತೀಯ ಲಿಂಗಿಗಳಿಗೂ ಈ ಸೇನೆಯಲ್ಲಿ ಅವಕಾಶ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಮುಂದಿನ ವರ್ಷ ಫೆಬ್ರವರಿಯಲ್ಲಿ ಮೌನಿ ಅಮಾವಾಸ್ಯೆಯಂದು ಪ್ರಯಾಗರಾಜ್ನಲ್ಲಿ ಈ ಸೇನೆಯನ್ನು ಪ್ರಾರಂಭಿಸಲಾಗುವುದು ಎಂದು ಅವಿಮುಕ್ತೇಶ್ವರಾನಂದ್ ಘೋಷಿಸಿದರು. ಇದನ್ನು ಚತುರಂಗಿಣಿ ಸೇನಾ ಎಂದು ಕರೆಯಲಾಗುವುದು ಎಂದು ಅವರು ಹೇಳಿದರು. ಚತುರಂಗಿಣಿ ಸೇನೆ ಪದಾತಿ ದಳ, ಅಶ್ವದಳ, ಆನೆಗಳು ಮತ್ತು ರಥಗಳನ್ನು ಹೊಂದಿರುವ ಸೈನ್ಯವನ್ನು ಸೂಚಿಸುತ್ತದೆ ಎಂದು ಶಂಕರಾಚಾರ್ಯರು ವಿವರಿಸಿದರು. ಮಹಾಭಾರತದಲ್ಲಿ ಚತುರಂಗಿಣಿ ಸೇನಾ ಎಂದು ಉಲ್ಲೇಖಿಸಲಾಗಿದೆ ಎಂದು ಅವರು ಹೇಳಿದರು.
ಈ ಸೇನೆಯು ಧರ್ಮ, ಸಂಸ್ಕೃತಿ ಮತ್ತು ಸಮಾಜವನ್ನು ರಕ್ಷಿಸುತ್ತದೆ ಎಂದು ಹೇಳಿದರು. ಈ ವೇಳೆ ಅವಿಮುಕ್ತೇಶ್ವರಾನಂದ ಮತ್ತು ಅವರ ಬೆಂಬಲಿಗರು ಕೊಡಲಿ ಮಾದರಿಗಳನ್ನು ಧರಿಸಿದ್ದರು. ಹೊಸ ಸೇನೆ ತನ್ನ ಶಸ್ತ್ರಾಗಾರದಲ್ಲಿ ಸಾಂಪ್ರದಾಯಿಕ ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿರುತ್ತದೆ ಎಂದು ಹೇಳಿದರು.
ಸೇನೆ ರಚನೆಯ ಕುರಿತು ಧಾರ್ಮಿಕ ನಾಯಕರ ಘೋಷಣೆಗಳನ್ನು ಆಡಳಿತ ಮಂಡಳಿ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಪರವಾನಗಿ ಇಲ್ಲದ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳುವುದು ಮತ್ತು ಅವುಗಳನ್ನು ಸಾರ್ವಜನಿಕವಾಗಿ ಝಳಪಿಸುವುದರಿಂದ ಕಾನೂನು ಕ್ರಮ ಜರುಗಿಸಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ತಿಂಗಳು, ಪ್ರಯಾಗ್ರಾಜ್ನಲ್ಲಿ ನಡೆದ ಮಾಘ ಮೇಳದ ಸಂದರ್ಭದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ತಮ್ಮ ಪಲ್ಲಕ್ಕಿಯಲ್ಲಿ ಸಂಗಮಕ್ಕೆ ಹೋಗಲು ಅನುಮತಿಸದ ನಂತರ ಟೀಕಿಸುವ ಮೂಲಕ ಅವಿಮುಕ್ತೇಶ್ವರಾನಂದ ಸುದ್ದಿಯಾಗಿದ್ದರು. ಮುಖ್ಯಮಂತ್ರಿ ನೇರವಾಗಿ ಪ್ರತಿಕ್ರಿಯಿಸದಿದ್ದರೂ, ರಾಮಾಯಣದ ಪೌರಾಣಿಕ ಪಾತ್ರವಾದ ಕಲ್ನೇಮಿಯನ್ನು ಜನರು ಗುರುತಿಸಬೇಕು ಎಂದು ಅವರು ಹೇಳಿದರು.
ಕಳೆದ ತಿಂಗಳು, ಉತ್ತರ ಪ್ರದೇಶ ಪೊಲೀಸರು ಮತ್ತೊಬ್ಬ ಧಾರ್ಮಿಕ ನಾಯಕ ಅಶುತೋಷ್ ಬ್ರಹ್ಮಚಾರಿ ಮಹಾರಾಜ್ ದೂರು ದಾಖಲಿಸಿದ ನಂತರ ಅವಿಮುಕೇಸ್ತೇಶ್ವರಾನಂದ ವಿರುದ್ಧ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ ದಾಖಲಿಸಲಾಗಿತ್ತು. ಅವರ ವಿರುದ್ಧ ಕಠಿಣ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಆರೋಪ ಹೊರಿಸಲಾಗಿದೆ.

