ಕೋಝಿಕ್ಕೋಡ್: ವಯನಾಡ್ ನ ಮುಂಡಕ್ಕೈ-ಚೂರಲ್ಮಾಲದಲ್ಲಿ ಸಂಭವಿಸಿದ್ದ ಭೂಕುಸಿತದಿಂದ ಮನೆ ಕಳೆದುಕೊಂಡಿದ್ದ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ 51 ಮನೆಗಳನ್ನು ಹಸ್ತಾಂತರಿಸಿತು.
ಶನಿವಾರ ತ್ರಿಕ್ಕೈಪಟ್ಟದಲ್ಲಿನ ಯೋಜನಾ ಸ್ಥಳದಲ್ಲಿ ಆಯ್ದ ಫಲಾನುಭವಿಗಳಿಗೆ ಮನೆಗಳ ಬೀಗದ ಕೈ ಹಾಗೂ ದಾಖಲೆಗಳನ್ನು ಐಯುಎಂಎಲ್ ರಾಜ್ಯಾಧ್ಯಕ್ಷ ಪಾನಕ್ಕಾಡ್ ಸಯ್ಯದ್ ಸಾದಿಕ್ ಅಲಿ ಶಿಹಾಬ್ ತಂಙಳ್ ಹಸ್ತಾಂತರಿಸಿದರು.
ಬಳಿಕ ಮಾತನಾಡಿದ ತಂಙಳ್, ಈ ಯೋಜನೆಯು ಸಾಮೂಹಿಕ ಪರಿಶ್ರಮ ಮತ್ತು ಬದ್ಧತೆಯ ಪ್ರತೀಕವಾಗಿದೆ ಎಂದು ಹೇಳಿದರು. ಈ ದುರಂತದಲ್ಲಿ ತೊಂದರೆಗೀಡಾದ ಕುಟುಂಬಗಳಿಗೆ ನೆರವು ಒದಗಿಸಲು ಜನರು ತೋರಿದ ಒಗ್ಗಟ್ಟನ್ನು ಅವರು ಇದೇ ಸಂದರ್ಭದಲ್ಲಿ ಶ್ಲಾಘಿಸಿದರು. ಈ ಯೋಜನೆಗೆ ಸ್ನೇಹ ಭವನಂ ಎಂಬ ಹೆಸರು ಇಡುವ ಮೂಲಕ ಜಾತಿ ಮತ್ತು ಧರ್ಮಕ್ಕಿಂತ ಮಾನವೀಯತೆ ದೊಡ್ಡದು ಎಂಬ ಸಂದೇಶವನ್ನು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ರವಾನಿಸಿದೆ ಎಂದೂ ಅವರು ತಿಳಿಸಿದರು.
ಮೊದಲ ಹಂತದಲ್ಲಿ ಮಂಜೂರು ಮಾಡಲಾಗಿರುವ 51 ಮನೆಗಳ ಪೈಕಿ 14 ಮನೆಗಳನ್ನು ಹಿಂದೂ ಕುಟುಂಬಗಳಿಗೆ ಮಂಜೂರು ಮಾಡಲಾಗಿದ್ದು, ಯಾವುದೇ ಡ್ರಾ ಇಲ್ಲದೆ ಆದ್ಯತೆಯ ಮೇರೆಗೆ ಅವರಿಗೆ ಮನೆಗಳನ್ನು ಮಂಜೂರು ಮಾಡಲಾಗಿದೆ. ಯೋಜನೆಯ ಮೊದಲ ಹಂತದಲ್ಲೇ ಈ ಅರ್ಜಿದಾರರಿಗೆ ಮನೆಗಳನ್ನು ಮಂಜೂರು ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. ಉಳಿದ 37 ಫಲಾನುಭವಿಗಳು ಮುಸ್ಲಿಂ ಸಮುದಾಯಕ್ಕೆ ಸೇರಿದ್ದು, ಅವರನ್ನೆಲ್ಲ ಡ್ರಾ ಮೂಲಕ ಆಯ್ಕೆ ಮಾಡಲಾಗಿದೆ.
ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, "ವಯನಾಡ್ ಭೂಕುಸಿತ ದುರಂತದ ಸಂತ್ರಸ್ತರಿಗೆ ಬೆಂಬಲ ಮತ್ತು ಅಗತ್ಯ ನೆರವು ಒದಗಿಸುವುದಾಗಿ ನೀಡಿದ್ದ ಭರವಸೆಯನ್ನು ಪೂರೈಸಿರುವ ಎಲ್ಲ ಪಕ್ಷಗಳ ಬಗೆಗೂ ನನಗೆ ಹೆಮ್ಮೆಯಿದೆ" ಎಂದು ಹೇಳಿದ್ದಾರೆ.

