ವಾಷಿಂಗ್ಟನ್: ಇರಾನ್ ವಿರುದ್ಧ ಅಮೆರಿಕ ಕೈಗೊಂಡ ಮಿಲಿಟರಿ ಕ್ರಮದ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ CNN ಪತ್ರಕರ್ತ ಹಾಗೂ ಕನ್ನಡದ ಖ್ಯಾತ ಕವಿ ಗೋಪಾಲಕೃಷ್ಣ ಅಡಿಗರ ಮೊಮ್ಮಗ ಮನು ರಾಜು, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರನ್ನು ಪ್ರಶ್ನಿಸಿ ಗಮನ ಸೆಳೆದಿದ್ದಾರೆ.
ಈ ಪ್ರಶ್ನೋತ್ತರ ವಿನಿಮಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ವಾಷಿಂಗ್ಟನ್ ಡಿಸಿಯಲ್ಲಿ ಈ ವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರುಬಿಯೊ, ಇಸ್ರೇಲ್ ಇರಾನ್ ಮೇಲೆ ತನ್ನದೇ ಆದ ದಾಳಿಯನ್ನು ಯೋಜಿಸುತ್ತಿದೆ ಮತ್ತು ನಂತರ ಟೆಹ್ರಾನ್ ಅಮೆರಿಕದ ಪಡೆಗಳ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಬಹುದು ಎಂದು ಅಮೆರಿಕದ ನಾಯಕರು ಅಂದಾಜಿಸಿದ್ದರಿಂದ ಅಮೆರಿಕ ಇರಾನ್ ವಿರುದ್ಧ ದಾಳಿಗಳನ್ನು ಆರಂಭಿಸಿತು ಎಂದು ಹೇಳಿದ್ದಾರೆ. ಹೆಚ್ಚಿನ ಸಾವುನೋವುಗಳನ್ನು ತಡೆಯಲು ಮುನ್ನೆಚ್ಚರಿಕೆಯ ಕ್ರಮವಾಗಿ ಅಮೆರಿಕ ಮೊದಲು ದಾಳಿ ಮಾಡಿತು ಎಂದು ಅವರು ವಿವರಿಸಿದರು.
ಅಮೆರಿಕದ ಪಡೆಗಳನ್ನು ರಕ್ಷಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರುಬಿಯೊ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯ ವೇಳೆ ಮನು ರಾಜು, ರುಬಿಯೊ ಅವರ ಹಿಂದಿನ ಹೇಳಿಕೆಯನ್ನು ಉಲ್ಲೇಖಿಸಿ, ಇಸ್ರೇಲ್ ನ ಯೋಜಿತ ದಾಳಿ ಇದ್ದಾಗ ಅಮೆರಿಕ ಯಾವ ಕಾರಣಕ್ಕೆ ಅದೇ ಸಮಯದಲ್ಲಿ ಕ್ರಮ ಕೈಗೊಂಡಿತು ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರುಬಿಯೊ, 'ಸ್ಪಷ್ಟೀಕರಣ ನೀಡಲು ಏನೂ ಇಲ್ಲ' ಎಂದು ಹೇಳಿ, ಒಂದು ಹಂತದಲ್ಲಿ ರಾಜು ಅವರಿಗೆ 'ಇದು ನನ್ನ ಪತ್ರಿಕಾಗೋಷ್ಠಿ' ಎಂದು ಉತ್ತರಿಸಿದರು.
ರುಬಿಯೊ ಅವರ ಹಿಂದಿನ ಹೇಳಿಕೆಗಳು ಅಮೆರಿಕದ ಕ್ರಮಗಳು ಇಸ್ರೇಲ್ನ ಯೋಜನೆಗಳಿಗೆ ಸಂಬಂಧಿಸಿದ್ದೇ ಎಂಬ ಅನುಮಾನವನ್ನು ಮೂಡಿಸಿರುವ ಹಿನ್ನೆಲೆಯಲ್ಲಿ ಈ ಪ್ರಶ್ನೋತ್ತರ ಪ್ರಾಮುಖ್ಯತೆ ಪಡೆದುಕೊಂಡಿದೆ. ಅಮೆರಿಕ ಇರಾನ್ ಮೇಲೆ ದಾಳಿ ನಡೆಸಲು ಕಾರಣವೇನು ಮತ್ತು ಇತರ ಮಿತ್ರ ರಾಷ್ಟ್ರಗಳು ಮಿಲಿಟರಿ ಕಾರ್ಯಾಚರಣೆಯ ಸಮಯದ ಮೇಲೆ ಪ್ರಭಾವ ಬೀರಿದೆಯೇ ಎಂಬ ಪ್ರಶ್ನೆಗಳು ಇದರಿಂದ ಉದ್ಭವಿಸಿವೆ.
ನಂತರ ರುಬಿಯೊ ತಮ್ಮ ಹಿಂದಿನ ಹೇಳಿಕೆಗಳನ್ನು ಸ್ಪಷ್ಟಪಡಿಸಲು ಪ್ರಯತ್ನಿಸಿದರು. ಅಮೆರಿಕಕ್ಕೆ ಇಸ್ರೇಲ್ ನ ಯೋಜನೆಗಳ ಬಗ್ಗೆ ಮಾಹಿತಿ ಇದ್ದರೂ ಇರಾನ್ ಮೇಲೆ ದಾಳಿ ಮಾಡುವ ಅಂತಿಮ ನಿರ್ಧಾರವನ್ನು ಅಮೆರಿಕದ ಅಧ್ಯಕ್ಷರೇ ತೆಗೆದುಕೊಂಡಿದ್ದಾರೆ ಮತ್ತು ಅದು ಯಾವ ಪರಿಸ್ಥಿತಿಯಲ್ಲಾದರೂ ಜಾರಿಗೆ ಬರುತ್ತಿತ್ತು ಎಂದು ಅವರು ಹೇಳಿದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಇಸ್ರೇಲ್ ಅಮೆರಿಕದ ಕ್ರಮಗಳನ್ನು ನಿರ್ದೇಶಿಸಿದೆ ಎಂಬ ಆರೋಪವನ್ನು ತಳ್ಳಿಹಾಕಿದ್ದಾರೆ. ಇರಾನ್ನಿಂದ ಉಂಟಾದ ಭದ್ರತಾ ಬೆದರಿಕೆಯನ್ನು ಅಂದಾಜಿಸಿದ ಆಧಾರದ ಮೇಲೆ ಅಮೆರಿಕ ಸ್ವತಂತ್ರವಾಗಿ ಈ ನಿರ್ಧಾರ ಕೈಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಅಮೆರಿಕ ವಿದೇಶಾಂಗ ಕಾರ್ಯದರ್ಶಿಯನ್ನು ಪ್ರಶ್ನಿಸಿದ ಪತ್ರಕರ್ತ ಮನು ರಾಜು ಯಾರು?
ಮನು ರಾಜು ಅಮೆರಿಕದ ಪ್ರಮುಖ ರಾಜಕೀಯ ಪತ್ರಕರ್ತರಲ್ಲಿ ಒಬ್ಬರು. ಪೊಲಿಟಿಕೊ ಹಾಗೂ ಇತರ ರಾಷ್ಟ್ರೀಯ ಸುದ್ದಿ ಸಂಸ್ಥೆಗಳಲ್ಲಿ ವರದಿ ಮಾಡಿದ ನಂತರ ಅವರು 2015ರಲ್ಲಿ CNN ಗೆ ಸೇರಿದರು. ಪ್ರಸ್ತುತ ಅವರು CNN ನ ಮುಖ್ಯ ಕಾಂಗ್ರೆಷನಲ್ ವರದಿಗಾರರಾಗಿದ್ದು, ಕ್ಯಾಪಿಟಲ್ ಹಿಲ್ ಹಾಗೂ ಅಮೆರಿಕದ ರಾಷ್ಟ್ರೀಯ ರಾಜಕೀಯವನ್ನು ವರದಿ ಮಾಡುತ್ತಿದ್ದಾರೆ. ಜೊತೆಗೆ CNN ನ ಭಾನುವಾರದ ರಾಜಕೀಯ ಕಾರ್ಯಕ್ರಮ 'ಇನ್ಸೈಡ್ ಪಾಲಿಟಿಕ್ಸ್ ವಿತ್ ಮನು ರಾಜು' ಕಾರ್ಯಕ್ರಮವನ್ನು ಸಹ ನಿರೂಪಿಸುತ್ತಿದ್ದಾರೆ.
ವಾಷಿಂಗ್ಟನ್ನಲ್ಲಿ ಅನುಭವಿ ವರದಿಗಾರರಾಗಿರುವ ರಾಜು, CNN ಗೆ ಸೇರುವ ಮೊದಲು ಏಳು ವರ್ಷಗಳ ಕಾಲ ಪೊಲಿಟಿಕೊದಲ್ಲಿ ಹಿರಿಯ ಕ್ಯಾಪಿಟಲ್ ಹಿಲ್ ವರದಿಗಾರರಾಗಿದ್ದರು. ಅದಕ್ಕೂ ಮುನ್ನ 'ದಿ ಹಿಲ್', 'ಕಾಂಗ್ರೆಷನಲ್ ಕ್ವಾರ್ಟರ್ಲಿ' ಮತ್ತು 'ಇನ್ಸೈಡ್ ವಾಷಿಂಗ್ಟನ್ ಪಬ್ಲಿಷರ್ಸ್' ಸೇರಿದಂತೆ ಹಲವು ಸಂಸ್ಥೆಗಳಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಟಿವಿ ಹಾಗೂ ರೇಡಿಯೊ ರಾಜಕೀಯ ಚರ್ಚಾ ಕಾರ್ಯಕ್ರಮಗಳಲ್ಲಿ ಅವರು ಆಗಾಗ್ಗೆ ಅತಿಥಿಯಾಗಿ ಭಾಗವಹಿಸುತ್ತಾರೆ.
ವಾಷಿಂಗ್ಟನ್ ರಾಜಕೀಯದ ಪ್ರಮುಖ ಘಟನೆಗಳು ಮತ್ತು ಚುನಾವಣಾ ಪ್ರಚಾರಗಳ ವರದಿಗಾಗಿ ಮನು ರಾಜು ಹಲವು ಪತ್ರಿಕೋದ್ಯಮ ಪ್ರಶಸ್ತಿಗಳನ್ನು ಪಡೆದಿದ್ದಾರೆ. 2022ರಲ್ಲಿ ಜನವರಿ 6ರಂದು ಅಮೆರಿಕದ ಕ್ಯಾಪಿಟಲ್ ಕಟ್ಟಡದ ಮೇಲೆ ನಡೆದ ದಾಳಿಯ ವರದಿಗಾಗಿ ರೇಡಿಯೋ ಮತ್ತು ಟೆಲಿವಿಷನ್ ಕರೆಸ್ಪಾಂಡೆಂಟ್ಸ್ ಅಸೋಸಿಯೇಷನ್ ನೀಡುವ ಡೇವಿಡ್ ಬ್ಲೂಮ್ ಪ್ರಶಸ್ತಿಯನ್ನು ಪಡೆದ ತಂಡದ ಭಾಗವಾಗಿದ್ದರು. ಅದೇ ವರ್ಷ ಮಿಲ್ವಾಕೀ ಪ್ರೆಸ್ ಕ್ಲಬ್ ಅವರು ಪತ್ರಿಕೋದ್ಯಮ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ 'ಸೇಕ್ರೆಡ್ ಕ್ಯಾಟ್' ಪ್ರಶಸ್ತಿಯಿಂದ ಗೌರವಿಸಿತು.
ಇದಕ್ಕೂ ಮೊದಲು 2012ರಲ್ಲಿ ಅಮೆರಿಕದ ಸಾಲದ ಮಿತಿ ಬಿಕ್ಕಟ್ಟಿನ ವರದಿಗಾಗಿ ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ ಅಸೋಸಿಯೇಷನ್ ನೀಡುವ ಮೆರಿಮನ್ ಸ್ಮಿತ್ ಪ್ರಶಸ್ತಿಯನ್ನು ಪಡೆದ ತಂಡದಲ್ಲೂ ಅವರು ಇದ್ದರು. 2015ರಲ್ಲಿ ಮಧ್ಯಂತರ ಚುನಾವಣಾ ವರದಿಗಾಗಿ ಡಿ.ಸಿ.ಯ ಸೊಸೈಟಿ ಆಫ್ ಪ್ರೊಫೆಷನಲ್ ಜರ್ನಲಿಸ್ಟ್ಸ್ ನೀಡುವ ಪ್ರಥಮ ಬಹುಮಾನ ಹಾಗೂ ಸೆನೆಟರ್ ಎಲಿಜಬೆತ್ ವಾರೆನ್ ಕುರಿತ ಫೀಚರ್ ವರದಿಗಾಗಿ ಫೋಲಿಯೊ: ಎಡ್ಡಿ ಪ್ರಶಸ್ತಿಯನ್ನೂ ಪಡೆದಿದ್ದಾರೆ. 2017ರಲ್ಲಿ ಅತ್ಯುತ್ತಮ ಕಾಂಗ್ರೆಸ್ ವರದಿಗಾಗಿ ನೀಡುವ ಜೋನ್ ಶೋರೆನ್ಸ್ಟೈನ್ ಬರೋನ್ ಪ್ರಶಸ್ತಿಯನ್ನೂ ಅವರು ಪಡೆದಿದ್ದಾರೆ.
ರಾಜಕಾರಣಿಗಳು ಸಾರ್ವಜನಿಕವಾಗಿ ಹೇಳದ ವಿಷಯಗಳನ್ನು ಪತ್ತೆಹಚ್ಚುವ ಸಾಮರ್ಥ್ಯ ಹೊಂದಿರುವ ವರದಿಗಾರನಾಗಿ ರಾಜು ಹೆಸರು ಮಾಡಿದ್ದಾರೆ. ರಾಜಕಾರಣಿಗಳನ್ನು ತೀಕ್ಷ್ಣವಾಗಿ ಹಾಗೂ ಕೌಶಲ್ಯಪೂರ್ಣವಾಗಿ ಪ್ರಶ್ನಿಸುವುದರಲ್ಲಿ ಅವರು ಪ್ರಸಿದ್ಧರಾಗಿದ್ದಾರೆ.
ಮನು ರಾಜು ಅವರು ಇಲಿನಾಯ್ಸ್ನಲ್ಲಿ ಜನಿಸಿದ್ದು, ಅವರ ಪೋಷಕರು 1970ರ ದಶಕದಲ್ಲಿ ಕರ್ನಾಟಕದಿಂದ ಅಮೆರಿಕಕ್ಕೆ ವಲಸೆ ಬಂದವರು. ಅವರ ತಂದೆ ವೈದ್ಯರಾಗಿದ್ದರು. ರಾಜು ಅವರು ಪ್ರಸಿದ್ಧ ಕನ್ನಡ ಕವಿ ಗೋಪಾಲಕೃಷ್ಣ ಅಡಿಗ ಮೊಮ್ಮಗ.
ವಿಸ್ಕಾನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುವಾಗ ಅಲ್ಲಿನ ವಿದ್ಯಾರ್ಥಿ ಪತ್ರಿಕೆ 'ದಿ ಬ್ಯಾಡ್ಜರ್ ಹೆರಾಲ್ಡ್'ನಲ್ಲಿ ಕೆಲಸ ಮಾಡುವ ಮೂಲಕ ರಾಜು ಪತ್ರಿಕೋದ್ಯಮ ಕ್ಷೇತ್ರಕ್ಕೆ ಕಾಲಿಟ್ಟರು. ಚಿಕಾಗೊ ಪ್ರದೇಶದಲ್ಲಿ ಬೆಳೆದ ಅವರು ಅಲ್ಲಿನ ಕ್ರೀಡಾ ತಂಡಗಳ ಅಭಿಮಾನಿಯಾಗಿಯೂ ಪರಿಚಿತರಾಗಿದ್ದಾರೆ.

