ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಯುದ್ಧದ ಪರಿಸ್ಥಿಯಿಂದಾಗಿ ಎದುರಾಗಿರುವ ಪರಿಣಾಮಗಳನ್ನು ಶಮನಗೊಳಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದ್ದರೆ, ಕಾಂಗ್ರೆಸ್ ಜನರಲ್ಲಿ ಅನಗತ್ಯ ಭೀತಿ ಸೃಷ್ಟಿಸುತ್ತಿದೆ ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಮೋದಿ, ಇರಾನ್ ಮೇಲಿನ ಅಮೆರಿಕ-ಇಸ್ರೇಲ್ ಜಂಟಿ ದಾಳಿಯು ಜಾಗತಿಕವಾಗಿ ಪರಿಣಾಮ ಬೀರಿದೆ.
ದೇಶದಲ್ಲಿ ಇದರ ಪರಿಣಾಮವನ್ನು ಕಡಿಮೆಗೊಳಿಸುವತ್ತ ಕೇಂದ್ರ ಸಾಧ್ಯವಾಗುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತದೆ. ಆದರೆ ಕಾಂಗ್ರೆಸ್ ಈ ಬಗ್ಗೆ ಜನರಲ್ಲಿ ಆತಂಕ ಸೃಷ್ಟಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಇರಾನ್-ಇಸ್ರೇಲ್ ಯುದ್ಧದಿಂದ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿರುವ ಬಿಕ್ಕಟ್ಟು, ಜೀವ ಕಳೆದುಕೊಳ್ಳುತ್ತಿರುವ ಮುಗ್ದ ನಾಗರಿಕರು ಮತ್ತು ಮೂಲಸೌಕರ್ಯ ನಾಶ ಕುರಿತು ಪ್ರಧಾನಿ ಮೋದಿ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಜತೆಗೆ ಭಾರತೀಯ ನಾಗರಿಕರ ಸುರಕ್ಷೆತೆ, ಅಡೆತಡೆ ಇಲ್ಲದೆ ಸರಕು ಹಾಗೂ ಇಂಧನ ಸಾಗಣೆಯು ಭಾರತದ ಪ್ರಮುಖ ಆದ್ಯತೆಯಾಗಿದೆ ಎಂದಿದ್ದಾರೆ.
ಕೊಲ್ಲಿ ಮತ್ತು ಪಶ್ಚಿಮ ಏಷ್ಯಾದಲ್ಲಿ ಸುಮಾರು ಒಂದು ಕೋಟಿ ಭಾರತೀಯರು ನೆಲೆಸಿದ್ದಾರೆ. ಇರಾನ್ನಲ್ಲಿ ವಿದ್ಯಾಭ್ಯಾಸ ಮತ್ತು ನೌಕರಿಗಾಗಿ ಸುಮಾರು 10 ಸಾವಿರ ಜನ ನೆಲೆಸಿದ್ದಾರೆ. ಇಸ್ರೇಲ್ನಲ್ಲಿ 40 ಸಾವಿರ ಜನ ಕೆಲಸ ಮಾಡುತ್ತಿದ್ದಾರೆ.

