ಕಾಸರಗೋಡು: ಕೇರಳದಲ್ಲಿ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆ ಚುನವಣಾ ಪ್ರಕ್ರಿಯೆ ಚುರುಕುಪಡೆದುಕೊಳ್ಳಲಾರಂಭಿಸಿದೆ.ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಅವರ ಅಧ್ಯಕ್ಷತೆಯಲ್ಲಿ ಚುನಾವಣಾ ಅಧಿಕಾರಿಗಳ ಸಭೆ ಸೋಮವಾರ ನಡೆಯಿತು. ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ನಿಟ್ಗಟಿನಲ್ಲಿ ಸಭೆ ಆಯೋಜಿಸಲಾಗಿತ್ತು.
ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳಲ್ಲಿ ಅನಧಿಕೃತವಾಗಿ ಅಳವಡಿಸಲಾಗಿರುವ ಪ್ರಚಾರ ಸಾಮಗ್ರಿಗಳನ್ನು ತಕ್ಷಣದಿಂದ ತೆಗೆದುಹಾಕಲು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು. ಸರ್ಕಾರಿ, ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳ ಮೇಲಿನ ಜಾಹೀರಾತುಗಳನ್ನು ಗರಿಷ್ಠ ಮೂರು ದಿವಸದೊಳಗೆ ತೆರವುಗೊಳಿಸಬೇಕು ಹಾಗೂ ಈ ಬಗ್ಗೆ ವರದಿ ಸಲ್ಲಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಲಾಯಿತು. ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಪತ್ತೆಹಚ್ಚುವುದರೊಂದಿಗೆ ಇಂತಹ ಉಲ್ಲಂಘನೆ ತಡೆಗಟ್ಟುವುದು ಮತ್ತು ಚುನಾವಣಾ ವೆಚ್ಚಗಳ ಬಗ್ಗೆ ಮೇಲ್ವಿಚಾರಣೆಗಾಗಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಫ್ಲೈಯಿಂಗ್ ಸ್ಕ್ವಾಡ್ಗಳು ಮತ್ತು ಮಾನನಷ್ಟ ನಿಗ್ರಹ ದಳ ಹಾಗೂ ಕಣ್ಗಾವಲು ಪಡೆಗಳನ್ನೂ ನಿಯೋಜಿಸಲಾಗಿದೆ. ಜತೆಗೆ, ಖರ್ಚುವೆಚ್ಚಗಳ ಸಹಾಯಕ ವೀಕ್ಷಕರನ್ನು ನೇಮಿಸಲಾಗುವುದು ಮತ್ತು ಮತದಾರರ ಜಾಗೃತಿಗಾಗಿ ಸ್ವೀಪ್ ಚಟುವಟಿಕೆಗಳನ್ನು ತೀವ್ರಗೊಳಿಸಲಾಗುವುದು. ಹಸಿರು ಸಂಹಿತೆಯನ್ನು ಅನುಸರಿಸಿ ಚುನಾವಣೆ ನಡೆಸುವ ಮಾದರಿಯನ್ನು ರಚಿಸಲು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು. ಜಿಲ್ಲೆಯಲ್ಲಿ ಸ್ಟ್ಯಾಟಿಕ್ ಸರ್ವೈಲೆನ್ಸ್ ತಂಡ ಮತ್ತು ಆಂಟಿ-ಫೇಸ್ಮೆಂಟ್ ಸ್ಕ್ವೇಡ್ ಕಾರ್ಯನಿರ್ವಹಿಸಲು ಪ್ರಾರಂಭಿಸಿದ್ದು, ಮಾದರಿ ನೀತಿ ಸಂಹಿತೆಯ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಸ್ಟ್ಯಾಟಿಕ್ ಸರ್ವೈಲೆನ್ಸ್ ತಂಡಗಳಿಗೆ 55 ವಾಹನಗಳನ್ನು ಮತ್ತು ಆ್ಯಂಟಿ-ಫೇಸ್ಮೆಂಟ್ ಸ್ಕ್ವೇಡ್ಗೆ ಐದು ವಾಹನಗಳನ್ನು ಹಂಚಿಕೆ ಮಾಡಿರುವುದಾಘಿ ಸಭೆಯಲ್ಲಿ ಮಾಹಿತಿ ನೀಡಲಾಯಿತು. ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಇತರ ಕಾರ್ಯವಿಧಾನಗಳ ಬಗ್ಗೆ ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ(ಎಡಿಎಂ)ಕೆ. ವಿ. ಶ್ರುತಿ, ಚುನಾವಣಾ ಅಧಿಕಾರಿಗಳು, ನೋಡಲ್ ಅಧಿಕಾರಿಗಳು ಮತ್ತು ಇತರರು ಭಾಗವಹಿಸಿದ್ದರು.



