ನವದೆಹಲಿ: ಲೋಕಸಭೆಯ ಇಬ್ಬರು ಸಂಸದರು ಸಂಬಳ ಪಡೆಯದೇ ಇರಲು ನಿರ್ಧರಿಸಿದ್ದಾರೆ. ಒಬ್ಬರು ಬಿಜೆಪಿಗೆ ಸೇರಿದ್ದರೆ, ಇನ್ನೊಬ್ಬರು ಕಾಂಗ್ರೆಸ್ನವರು. ಈ ಇಬ್ಬರು ತಮ್ಮ ಸಂಬಳ ಪಡೆಯದಿರಲು (not draw salary) ಆಯ್ಕೆ ಮಾಡಿಕೊಂಡಿದ್ದಾರೆ ಎಂಬುದು ಮಾಹಿತಿ ಹಕ್ಕು ಕಾಯ್ದೆಯಡಿ (Right To Information) ಮಾಧ್ಯಮವೊಂದು ಬಹಿರಂಗಪಡಿಸಿದೆ.
ಸಾಮಾನ್ಯವಾಗಿ ಸಂಸದರು ಸಂಬಳ, ಸವಲತ್ತು ಹೆಚ್ಚಿಸಿಕೊಳ್ಳಲು ಒತ್ತಾಯ ಮಾಡುತ್ತಾರೆ. ಆದರೆ ಇವರ ನಡುವೆ ಈ ಇಬ್ಬರು ಸಂಸದರು ಒಂದು ರೂಪಾಯಿ ಕೂಡ ಸಂಬಳ ಬೇಡ ಎಂದಿರುವುದು ವಿಶೇಷ.
ಒಬ್ಬರು ಕುರುಕ್ಷೇತ್ರ ಮತ್ತು ಮತ್ತೊಬ್ಬರು ಇಂಫಾಲ್ ನ ಸಂಸದರಾಗಿದ್ದು, ಇವರಿಬ್ಬರ ಕ್ಷೇತ್ರದ ನಡುವಿನ ಅಂತರ 2,575 ಕಿಲೋಮೀಟರ್ಗಳಿಗಿಂತ ಹೆಚ್ಚು. ಆದರೂ ಪರಸ್ಪರ ಪೈಪೋಟಿ ನೀಡುವಂತೆ ಇವರಲ್ಲಿ ಒಬ್ಬರು ಸಂಬಳ ಬೇಡ ಎಂದು ಹೇಳಿದ್ದರೆ, ಇನ್ನೊಬ್ಬರು ಒಂದು ಹೆಜ್ಜೆ ಮುಂದೆ ಹೋಗಿ ಕಚೇರಿಯೊಂದಿಗೆ ಬರುವ ಸರ್ಕಾರಿ ಸವಲತ್ತು ಮತ್ತು ಭತ್ಯೆಗಳು ಕೂಡ ಬೇಡ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಲೋಕಸಭಾ ಸಚಿವಾಲಯದ ಮಾಹಿತಿ ಪ್ರಕಾರ ಕುರುಕ್ಷೇತ್ರದ ಸಂಸದ ನವೀನ್ ಜಿಂದಾಲ್ ಮತ್ತು ಇನ್ನರ್ ಮಣಿಪುರದ ಸಂಸದ ಡಾ. ಬಿಮೋಲ್ ಅಕೋಯಿಜಮ್ ಅಂಗೋಮ್ಚಾ ಅವರು ಸಂಬಳ ಪಡೆಯದಿರಲು ತೀರ್ಮಾನಿಸಿದ್ದಾರೆ. ಜಿಂದಾಲ್ ಅವರು ಭತ್ಯೆ ಅಥವಾ ಸವಲತ್ತುಗಳನ್ನು ಕೂಡ ನಿರಾಕರಿಸಿದ್ದಾರೆ.
ಚುನಾವಣಾ ಅಫಿಡವಿಟ್ಗಳ ಪ್ರಕಾರ, ಈ ಇಬ್ಬರು ಸಂಸದರು ವಿಭಿನ್ನ ಆರ್ಥಿಕ ಹಿನ್ನೆಲೆಯಿಂದ ಬಂದವರು. ಕುರುಕ್ಷೇತ್ರದ ಸಂಸದ ನವೀನ್ ಜಿಂದಾಲ್ 1,241 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದು, ಇನ್ನರ್ ಮಣಿಪುರವನ್ನು ಪ್ರತಿನಿಧಿಸುವ ಡಾ. ಬಿಮೋಲ್ ಅಕೋಯಿಜಮ್ ಅಂಗೋಮ್ಚಾ ಸುಮಾರು 97 ಲಕ್ಷ ರೂ. ಆಸ್ತಿಯನ್ನು ಹೊಂದಿದ್ದಾರೆ.
18ನೇ ಲೋಕಸಭೆಯ ಅತ್ಯಂತ ಶ್ರೀಮಂತ ಸದಸ್ಯರಲ್ಲಿ ಒಬ್ಬರಾಗಿರುವ ಜಿಂದಾಲ್ ಅತ್ಯಂತ ಶ್ರೀಮಂತರಲ್ಲ. ಗುಂಟೂರಿನ ತೆಲುಗು ದೇಶಂ ಸಂಸದ ಚಂದ್ರಶೇಖರ್ ಪೆಮ್ಮಸಾನಿ ಅವರು ಅತ್ಯಂತ ಶ್ರೀಮಂತ ಸಂಸದರಾಗಿದ್ದು, ಇವರು 5,705 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಬಿಜೆಪಿ ಸಂಸದ ಕೊಂಡ ವಿಶ್ವೇಶ್ವರ ರೆಡ್ಡಿ ಅವರು 4,568 ಕೋಟಿ ರೂ. ಗಳಿಗೂ ಹೆಚ್ಚು ಆಸ್ತಿಯನ್ನು ಹೊಂದಿದ್ದಾರೆ. ಒಟ್ಟು 543 ಸಂಸದರನ್ನು ಹೊಂದಿರುವ ಲೋಕಸಭೆಯ 481 ಹಾಲಿ ಸದಸ್ಯರು ಸಂಬಳ ಪಡೆಯುತ್ತಿದ್ದಾರೆ. ಉಳಿದ ಸಂಸದರ ಸ್ಥಿತಿಯ ಕುರಿತು ಯಾವುದೇ ಮಾಹಿತಿ ಇಲ್ಲ.

