ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ದಿನದಿಂದ ದಿನಕ್ಕೆ ಉದ್ವಿಗ್ನತೆ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಇಸ್ರೇಲ್ ಮೇಲೆ ಇರಾನ್ 83ನೇ ಸುತ್ತಿನ ಕ್ಷಿಪಣಿ ದಾಳಿ ನಡೆಸಿದ್ದು, ಇದಕ್ಕೆ ಬಳಸಿದ ಕ್ಷಿಪಣಿಗಳ ಮೇಲೆ 'ಭಾರತದ ಜನರಿಗೆ ಧನ್ಯವಾದಗಳು' ಎಂದು ಬರೆಯಲಾಗಿದೆ.
ಇಸ್ರೇಲ್ ಮೇಲಿನ ದಾಳಿ ಕುರಿತಂತೆ ಮುಂಬೈಯಲ್ಲಿರುವ ಇರಾನ್ನ ಕಾನ್ಸುಲೇಟ್ ಕಚೇರಿ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ನಲ್ಲಿ ಮಾಹಿತಿ ನೀಡಿದೆ. 'ಕ್ಷಿಪಣಿಗಳ ಮೇಲೆ ಭಾರತ, ಪಾಕಿಸ್ತಾನ, ಸ್ಪೇನ್ ಹಾಗೂ ಜರ್ಮನಿ ದೇಶದ ಜನರಿಗೆ ಧನ್ಯವಾದಗಳು' ಎಂದು ಬರೆದಿರುವ ಫೋಟೊಗಳನ್ನೂ ಹಂಚಿಕೊಂಡಿದೆ.
'ಭಾರತ, ಚೀನಾ, ರಷ್ಯಾ, ಇರಾಕ್, ಪಾಕಿಸ್ತಾನ ರಾಷ್ಟ್ರಗಳಿಗೆ ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಿದ್ದೇವೆ. ಈ ಐದು ದೇಶಗಳತ್ತ ತೆರಳುವ ಸರಕು ಸಾಗಣೆ ಹಡಗುಗಳಿಗೆ ನಾವು ಹೊರ್ಮುಜ್ ದಾಟಲು ಅವಕಾಶ ನೀಡಿದ್ದೇವೆ' ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಗ್ಚಿ ಈಚೆಗೆ ಹೇಳಿದ್ದರು.
ಏತನ್ಮಧ್ಯೆ, ಯುದ್ಧಪೀಡಿತ ಇರಾನ್ಗಾಗಿ ಕಾಶ್ಮೀರ ಮತ್ತು ಲಡಾಖ್ನ ಕಾರ್ಗಿಲ್ನಾದ್ಯಂತ ಬೃಹತ್ ದೇಣಿಗೆ ಅಭಿಯಾನಗಳು ನಡೆದಿದ್ದವು.
ಜನರು ನಗದು ಮಾತ್ರವಲ್ಲದೆ, ಚಿನ್ನ, ಬೆಳ್ಳಿ, ತಾಮ್ರದ ಪಾತ್ರೆಗಳು, ಜಾನುವಾರು, ಕಾರು, ಬೈಕ್ ಸೇರಿದಂತೆ ಇತರೆ ವಾಹನಗಳನ್ನೂ ದಾನ ಮಾಡಿದ್ದಾರೆ. ಇದಕ್ಕಾಗಿ ಇರಾನ್ ರಾಯಭಾರ ಕಚೇರಿಯು ಭಾರತಕ್ಕೆ ಧನ್ಯವಾದ ಸಲ್ಲಿಸಿದೆ ಎಂದು ಹೇಳಲಾಗಿದೆ.
ದೇಣಿಗೆಯ ಫೋಟೊಗಳನ್ನು ಇರಾನ್ ರಾಯಭಾರ ಕಚೇರಿಯು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ. 'ಕಾಶ್ಮೀರದ ಜನರ ಮಾನವೀಯತೆಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ. ನಿಮ್ಮ ದಯೆ ಮತ್ತು ಮಾನವೀಯತೆಯನ್ನು ನಾವು ಎಂದಿಗೂ ಮರೆಯುವುದಿಲ್ಲ' ಎಂದು ಬರೆದುಕೊಂಡಿದೆ.

