ಚಿದಂಬರಂ ವಿರುದ್ಧ ಏನೇನು ಕೇಸ್ ದಾಖಲಾಗಿವೆ?
ಮಾರ್ಚ್ 2 ರಂದು ಪ್ರಕರಣ ದಾಖಲು ಮಾಡಲಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 74 (ಮಹಿಳೆಯ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲ ಪ್ರಯೋಗ) ಮತ್ತು ಸೆಕ್ಷನ್ 75 (ಲೈಂಗಿಕ ಕಿರುಕುಳದ ಅಪರಾಧಗಳು) ಅಡಿಯಲ್ಲಿ ಚಿದಂಬರಂ ಅವರ ಮೇಲೆ ಆರೋಪ ಹೊರಿಸಲಾಗಿದೆ. ಲೈಂಗಿಕ ದುರ್ವರ್ತನೆ ಮತ್ತು ಕಿರುಕುಳದ ಪ್ರಕರಣಗಳಲ್ಲಿ ಈ ಸೆಕ್ಷನ್ಗಳನ್ನು ಅನ್ವಯಿಸಲಾಗುತ್ತದೆ. ದೂರುದಾರರು ನೀಡಿದ ವಿವರಗಳನ್ನು ಪರಿಶೀಲಿಸಿದ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಕೊಚ್ಚಿ ಅಪಾರ್ಟ್ಮೆಂಟ್ನಲ್ಲಿ ನಡೆದ ಘಟನೆ
ಪೊಲೀಸ್ ಮೂಲಗಳ ಪ್ರಕಾರ, ಕೊಚ್ಚಿಯ ಎಲಂಕುಲಂ ಪ್ರದೇಶದಲ್ಲಿರುವ ನಟಿಯ ಅಪಾರ್ಟ್ಮೆಂಟ್ಗೆ ಚಿದಂಬರಂ ಅವರು ಅತಿಕ್ರಮವಾಗಿ ಪ್ರವೇಶ ಮಾಡಿದ್ದರಂತೆ. ಅಂದು ಭೇಟಿಯ ಸಮಯದಲ್ಲಿ ಅವರು ಲೈಂಗಿಕವಾಗಿ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕೃತ ದೂರು ದಾಖಲಿಸುವ ಮೊದಲು ಪೊಲೀಸರು ಮಹಿಳೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. "ವಿಚಾರಣೆಗೆ ಹಾಜರಾಗುವಂತೆ ನಿರ್ದೇಶಕ ಚಿದಂಬರಂ ಅವರಿಗೆ ನೋಟಿಸ್ ನೀಡಲಾಗುವುದು" ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರಸ್ತುತ ಪೊಲೀಸ್ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದ ಪುರಾವೆಗಳನ್ನು ಮತ್ತು ಹೇಳಿಕೆಗಳನ್ನು ಸಂಗ್ರಹಿಸುತ್ತಿದ್ದಾರೆ. ತನಿಖೆಯ ಸಂಶೋಧನೆಗಳ ಆಧಾರದ ಮೇಲೆ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಚಿದಂಬರಂ ಅವರ ಬಗ್ಗೆ
ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನೂರಿನವರಾದ ಚಿದಂಬರಂ ಎಸ್. ಪೊದುವಾಲ್, ನಿರ್ದೇಶಕರಾಗುವ ಮೊದಲು ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ಸಂಕಲನಕಾರ ಬಿ. ಅಜಿತ್ಕುಮಾರ್ ಮತ್ತು ಸಿನಿಮಾಟೋಗ್ರಾಫರ್ ರಾಜೀವ್ ರವಿ ಅವರೊಂದಿಗೆ ಸಹಾಯಕರಾಗಿ ಕೆಲಸ ಮಾಡಿದ್ದರು. 2021ರಲ್ಲಿ ತೆರೆಕಂಡ ಜಾನ್ ಎ ಮನ್ ಚಿತ್ರದ ಮೂಲಕ ನಿರ್ದೇಶಕರಾದರು. ಆನಂತರ 2024ರಲ್ಲಿ
ಮಂಜುಮ್ಮಲ್ ಬಾಯ್ಸ್ ಚಿತ್ರವನ್ನು ನಿರ್ದೇಶಿಸಿದ್ದರು. ಅದು ಅವರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ತಂದುಕೊಟ್ಟಿತು. ಇದೊಂದು ನೈಜ ಘಟನೆಯನ್ನು ಆಧರಿಸಿದ ಸರ್ವೈವಲ್ ಥ್ರಿಲ್ಲರ್ ಆಗಿದ್ದು, 240 ಕೋಟಿ ರೂ.ಗಳಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಸದ್ಯ ಬಾಲನ್ ಎಂಬ ಸಿನಿಮಾವನ್ನು ಚಿದಂಬರಂ ಅವರು ನಿರ್ದೇಶನ ಮಾಡುತ್ತಿದ್ದಾರೆ.

