ನವದೆಹಲಿ: ಇರಾನ್ ಮೇಲಿನ ಅಮೆರಿಕ ಹಾಗೂ ಇಸ್ರೇಲ್ ಜಂಟಿ ಕಾರ್ಯಾಚರಣೆಯ ನಂತರ ಉಂಟಾಗಿರುವ ಸಂಘರ್ಷವು ಪಶ್ಚಿಮ ಏಷ್ಯಾ ದೇಶಗಳಲ್ಲಿ ಭೀತಿ ಉಂಟು ಮಾಡಿದ್ದರೆ, ಜಗತ್ತಿನಲ್ಲಿ ಆತಂಕ ಸೃಷ್ಟಿಯಾಗಿದೆ.
ಜಗತ್ತಿನ ಬಹುಪಾಲು ಕಚ್ಚಾತೈಲ ಉತ್ಪಾದನೆ ಮಾಡುವ ಕೊಲ್ಲಿ ದೇಶಗಳಲ್ಲಿನ ಯುದ್ಧದ ವಾತಾವರಣವು, ತೈಲ ಸರಬರಾಜಿನ ಮೇಲೆ ನೇರ ಹೊಡೆತ ಬೀಳುವಂತೆ ಮಾಡಿದೆ.
ಭಾರತವು ರಷ್ಯಾದಿಂದ ಕಚ್ಚಾತೈಲ ಆಮದು ಮಾಡಿಕೊಳ್ಳುತ್ತಿರುವುದರಿಂದ, ಅಷ್ಟೇನೂ ತೊಂದರೆ ಸಂಭವಿಸಿಲ್ಲ. ಆದರೆ, ಎಲ್ಪಿಜಿ, ಷೇರು ಮಾರುಕಟ್ಟೆ ಮೇಲೆ ಬಾರಿ ಹೊಡೆತ ಬಿದ್ದಿದೆ.
ಷೇರು ಮಾರುಕಟ್ಟೆ: ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷವು ಷೇರು ಮಾರುಕಟ್ಟೆ ಮೇಲೆ ನೇರ ಪರಿಣಾಮ ಬೀರಿದೆ. ಕಚ್ಚಾ ತೈಲ ಏರಿಕೆ ಹಾಗೂ ವಿದೇಶಿ ಹೂಡಿಕೆದಾರರು ಹೂಡಿಕೆ ಹಿಂಪಡೆಯುತ್ತಿರುವ ಕಾರಣ 'ಕರಡಿ ಕುಣಿತ' ಉಂಟಾಗಿತ್ತು. ಸೋಮವಾರ(ಮಾ.9) ಸೆನ್ಸೆಕ್ಸ್ ಮತ್ತು ನಿಫ್ಟಿ ಶೇ 1.7ರಷ್ಟು ಕುಸಿದಿದ್ದವು. ಮಂಗಳವಾರ ಸ್ವಲ್ಪ ಚೇತರಿಸಿಕೊಂಡಿದೆ. ಆದರೆ, ಕೊಲ್ಲಿ ರಾಷ್ಟ್ರಗಳ ಸಂಘರ್ಷವು ಮುಂದುವರಿದಷ್ಟು ದಿನವೂ ಷೇರು ಮಾರುಕಟ್ಟೆಯು ಅನಿಶ್ಚಿತತೆಗೆ ಸಾಕ್ಷಿಯಾಗಲಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸುತ್ತಿದ್ದಾರೆ.
ಎಲ್ಪಿಜಿ: ಭಾರತದಲ್ಲಿ ಸದ್ಯಕ್ಕೆ ಎಲ್ಪಿಜಿ ಸಂಗ್ರಹದ ಕುರಿತು ಭಾರಿ ಗೊಂದಲ ಕಾಣಿಸಿಕೊಳ್ಳುತ್ತಿದೆ. ಎಲ್ಪಿಜಿ ಆಮದಿನ ಪ್ರಮಾಣವು ಶೇ.30ರಷ್ಟು ಕುಸಿತ ಕಂಡಿದೆ. ಕೇಂದ್ರ ಸರ್ಕಾರವು ತೈಲ ಮಾರುಕಟ್ಟೆ ಕಂಪನಿಗಳು ಪೂರೈಸುವ ಎಲ್ಪಿಜಿಯನ್ನು ಕೇವಲ ಗೃಹ ಬಳಕೆದಾರರಿಗೆ ಮಾತ್ರ ಮಾರಾಟ ಮಾಡಬೇಕೆಂದು ಆದೇಶ ನೀಡಿದ ನಂತರ, ಹೋಟೆಲ್ ಉದ್ಯಮದ ಮೇಲೆ ಕರಿನೆರಳವು ಮೂಡಿದೆ. ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಮೂವರು ನಿರ್ದೇಶಕರ ಕಾರ್ಯಕಾರಿ ಸಮಿತಿಯನ್ನು ರಚನೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ. ಆದರೂ, ಎಲ್ಪಿಜಿ ಅಕ್ರಮ ದಾಸ್ತನು ಹಾಗೂ ಬೆಲೆ ಏರಿಕೆ ಪ್ರಕರಣಗಳು ವರದಿಯಾಗುತ್ತಿವೆ.
ಕಚ್ಚಾತೈಲ: ಸದ್ಯಕ್ಕೆ ಭಾರತವು ರಷ್ಯಾದಿಂದ ಕಚ್ಚಾತೈಲ ಆಮದು ಮಾಡಿಕೊಳ್ಳುತ್ತಿರುವುದರಿಂದ ಕಚ್ಚಾತೈಲದ ಕೊರತೆ ಅತಿಹೆಚ್ಚು ಉಂಟಾಗಿಲ್ಲ. ಇನ್ನೂ ಎಂಟು ವಾರಗಳಿಗೆ ಆಗುವಷ್ಟು ಕಚ್ಚಾತೈಲ ಸಂಗ್ರಹವು ಭಾರತದ ಬಳಿಯಿದೆ. ಆದರೆ, ಜಗತ್ತಿನ ವಿವಿಧ ದೇಶಗಳಿಗೆ ತೈಲ ಸರಬರಾಜಾಗುವ ಹೊರ್ಮುಜ್ ಜಲಸಂಧಿಯನ್ನು ಇರಾನ್ ತನ್ನ ವಶದಲ್ಲಿಟ್ಟುಕೊಂಡಿರುವುದರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಏರಿಕೆಯಾಗುತ್ತಿದೆ. ಇದು ಭಾರತದ ಮೇಲೂ ಪರಿಣಾಮ ಬೀರಲಿದೆ. ಬಿಟುಮೆನ್ ಪೂರೈಕೆ ಸ್ಥಗಿತವಾಗಿರುವುದರಿಂದ ಬಂದರು ಆದಾಯಕ್ಕೆ ಹೊಡೆತ ಬೀಳಲಿದೆ.
ವಿಮಾನಯಾನ: ಪಶ್ಚಿಮ ಏಷ್ಯಾದಲ್ಲಿನ ಹಲವು ವಾಯುಪ್ರದೇಶಗಳನ್ನು ನಾಗರಿಕ ವಿಮಾನಯಾನಕ್ಕೆ ನಿರ್ಬಂಧ ವಿಧಿಸಿದ್ದು, ಬದಲಿ ಮಾರ್ಗದಲ್ಲಿ ಕೆಲವು ವಿಮಾನಗಳು ಸಂಚರಿಸುತ್ತಿವೆ. ಆದರೆ, ಪ್ರತಿದಿನವೂ ಕೊಲ್ಲಿ ದೇಶಗಳಿಗೆ ಹೆಚ್ಚಿನ ಸಂಖ್ಯೆಯ ಭಾರತೀಯರು ಪ್ರಯಾಣಿಸುತ್ತಿದ್ದರು. ಸಂಘರ್ಷದ ಪರಿಸ್ಥಿತಿಯಿಂದ ಆ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ. ಇದರಿಂದ ವಿಮಾನಯಾನ ಸಂಸ್ಥೆಗಳಿಗೂ ಹೊಡೆಯ ಬಿದ್ದಿದೆ. ಇದರೊಂದಿಗೆ, ವಿಮಾನ ನಿಲ್ದಾಣದಲ್ಲಿನ ಕ್ಯಾಬ್ ಚಾಲಕರಿಗೂ ಸಂಕಷ್ಟ ಎದುರಾಗಿದೆ.

