ಪುಣೆ: 'ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿದ್ದ ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ಬಾರಾಮತಿ ವಿಮಾನ ದುರಂತ ಸಂಬಂಧ ಲಿಯರ್ಜೆಟ್ ವಿಮಾನದ ಪೈಲಟ್ ಮೇಲೆ ಆರೋಪ ಹೊರಿಸಲು ವಿಎಸ್ಆರ್ ವೆಂಚರ್ಸ್ ಮಾಲೀಕ ವಿ.ಕೆ.ಸಿಂಗ್ ಪ್ರಯತ್ನಿಸುತ್ತಿದ್ದಾರೆಯೇ' ಎಂದು ಶರದ್ ಪವಾರ್ ನೇತೃತ್ವದ ಎನ್ಸಿಪಿ (ಎಸ್ಪಿ) ಶಾಸಕ ರೋಹಿತ್ ಪವಾರ್ ಪ್ರಶ್ನಿಸಿದ್ದಾರೆ.
ವಿಮಾನ ದುರಂತ ಸಂಬಂಧ ಈಚೆಗೆ ಮಹಾರಾಷ್ಟ್ರ ಅಪರಾಧ ತನಿಖಾದಳವು (ಸಿಐಡಿ) ವಿ.ಕೆ. ಸಿಂಗ್ ಅವರನ್ನು ವಿಚಾರಣೆ ನಡೆಸಿ, ಹೇಳಿಕೆ ದಾಖಲಿಸಿಕೊಂಡಿತ್ತು. ಆದರೆ, ಯಾವುದೇ ನಿರ್ದಿಷ್ಟ ಮಾಹಿತಿಯನ್ನು ಬಹಿರಂಗಪಡಿಸಿರಲಿಲ್ಲ.
ಜನವರಿ 28ರಂದು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ನಡೆದ ವಿಮಾನ ದುರಂತದಲ್ಲಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಮೃತಪಟ್ಟಿದ್ದರು. ಘಟನೆಯ ಕುರಿತಂತೆ ರೋಹಿತ್ ಅವರು ನಿರಂತರವಾಗಿ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.
ವಿ.ಕೆ.ಸಿಂಗ್ ಅವರನ್ನು ಸಿಐಡಿ ವಿಚಾರಣೆ ನಡೆಸಿದ ಕುರಿತಾದ ಮಾಧ್ಯಮಗಳ ವರದಿಗಳನ್ನು ಉಲ್ಲೇಖಿಸಿ ರೋಹಿತ್ ಅವರು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ. 'ಕಪ್ಪು ಪೆಟ್ಟಿಗೆಯಲ್ಲಿ ನಿಖರವಾಗಿ ಏನು ದಾಖಲಾಗಿದೆ ಎಂಬುದು ಇನ್ನೂ ಬಹಿರಂಗಗೊಂಡಿಲ್ಲ. ಹಾಗಿದ್ದಲ್ಲಿ, ಅಪಘಾತಕ್ಕೆ ಪೈಲಟ್ ಕಾರಣ ಎಂಬುದು ವಿಎಸ್ಆರ್ ಕಂಪನಿಯ ಮಾಲೀಕ ವಿ.ಕೆ. ಸಿಂಗ್ಗೆ ಹೇಗೆ ತಿಳಿಯಿತು' ಎಂದು ಪ್ರಶ್ನಿಸಿದ್ದಾರೆ.
'ವಿ.ಕೆ. ಸಿಂಗ್ ಅವರು ವಿಮಾನ ದುರಂತಕ್ಕೆ ಪೈಲಟ್ ಕಾರಣ ಎಂದು ಹೇಳುವ ಮೂಲಕ ಬೇರೆಯವರ ಮೇಲೆ ತಪ್ಪು ಹೊರಿಸಿ ಪ್ರಕರಣದಿಂದ ಕೈತೊಳೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ' ಎಂದು ರೋಹಿತ್ ಹೇಳಿದ್ದಾರೆ.
ವಿಮಾನ ಅಪಘಾತದ ಬಗ್ಗೆ ಅಧಿಕಾರಿಗಳು ನಿರ್ದಿಷ್ಟ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಬಿಡುಗಡೆ ಮಾಡುವವರೆಗೆ, ಜನರು ಯಾವುದೇ ಚರ್ಚೆಗಳು ಅಥವಾ ಆಧಾರರಹಿತ ಹೇಳಿಕೆಗಳನ್ನು ನಂಬಬಾರದು ಎಂದು ರೋಹಿತ್ ತಿಳಿಸಿದ್ದಾರೆ.
'ಅಜಿತ್ ದಾದಾ ವಿಮಾನ ಅಪಘಾತದ ತನಿಖೆ ಇನ್ನೂ ನಡೆಯುತ್ತಿದೆ ಎಂದು ಸಿಐಡಿ ಹೇಳಿದೆ. ವಿಮಾನ ಅಪಘಾತ ತನಿಖಾ ಬ್ಯೂರೋದ (ಎಎಐಬಿ) ಇತ್ತೀಚಿನ ಪ್ರಾಥಮಿಕ ವರದಿಯ ವಿಶ್ವಾಸಾರ್ಹತೆಯ ಬಗ್ಗೆ ಮಾತನಾಡುವುದು ಸಹ ಕಷ್ಟ ಎಂದೂ ಅವರು ಹೇಳಿದ್ದಾರೆ.
'ವಿಮಾನದ ಕಪ್ಪು ಪೆಟ್ಟಿಗೆ ಸುಟ್ಟುಹೋಗಿದೆ ಎಂದು ಕೆಲವು ವರದಿಗಳು ಹೇಳಿದರೆ, ದತ್ತಾಂಶವನ್ನು ಮರುಪಡೆಯಲಾಗಿದೆ ಎಂದು ಕೆಲವು ವರದಿಗಳಲ್ಲಿ ಉಲ್ಲೇಖಿಸಲಾಗಿದೆ. ಏತನ್ಮಧ್ಯೆ, ತನಿಖಾ ಸಂಸ್ಥೆಗಳು ಈ ವಿಷಯದ ಬಗ್ಗೆ ಸಂಪೂರ್ಣ ಮೌನವನ್ನು ಕಾಯ್ದುಕೊಂಡಿವೆ' ಎಂದಿದ್ದಾರೆ.

