ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ತೀವ್ರಗೊಂಡಿರುವ ಉದ್ವಿಗ್ನತೆ ಶಮನಗೊಳಿಸುವ ನಿಟ್ಟಿನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು, ಒಮಾನ್ ಸುಲ್ತಾನ ಹೈತಮ್ ಬಿನ್ ತಾರಿಕ್, ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಹಾಗೂ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರನ್ ಅವರೊಂದಿಗೆ ಗುರುವಾರ ಮಾತುಕತೆ ನಡೆಸಿದ್ದಾರೆ.
ಹೊರ್ಮುಜ್ ಜಲಸಂದಿಯಲ್ಲಿ ಸುರಕ್ಷಿತ ಹಾಗೂ ಮುಕ್ತ ಸಂಚಾರ ಸಾಧ್ಯವಾಗುವುದು ಜಾಗತಿಕ ಮಾರುಕಟ್ಟೆ ಪಾಲಿಗೆ ಎಷ್ಟು ಮುಖ್ಯ ಎಂಬುದನ್ನು ಮಾತುಕತೆ ವೇಳೆ ಒತ್ತಿ ಹೇಳಿದ್ದಾರೆ.
ಈ ಸಂಬಂಧ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ನಲ್ಲಿ ಬರೆದುಕೊಂಡಿರುವ ಮೋದಿ, ʼಸಹೋದರ ಹೈತಮ್ ಬಿನ್ ತಾರಿಕ್ ಅವರೊಂದಿಗೆ ಫಲಪ್ರದ ಮಾತುಕತೆ ನಡೆಸಿದೆ. ಉದ್ವಿಗ್ನತೆ ಶಮನಗೊಳಿಸುವುದು, ಶಾಂತಿ, ಸ್ಥಿರತೆ ಪುನಃಸ್ಥಾಪಿಸುವ ನಿಟ್ಟಿನಲ್ಲಿ ರಾಜತಾಂತ್ರಿಕ ಮಾತುಕತೆಗೆ ಆದ್ಯತೆ ನೀಡುವುದಕ್ಕೆ ಸಮ್ಮತಿಸಿದ್ದೇವೆʼ ಎಂದು ತಿಳಿಸಿದ್ದಾರೆ. ಒಮಾನ್ ಜನರಿಗೆ ಈದ್ ಆಚರಣೆ ಪ್ರಯುಕ್ತ ಮುಂಚಿತವಾಗಿಯೇ ಶುಭಾಶಯ ಕೋರಿರುವುದಾಗಿಯೂ ಹೇಳಿದ್ದಾರೆ.
ಒಮಾನ್ ಸಾರ್ವಭೌಮತೆ, ಪ್ರಾದೇಶಿಕ ಸಮಗ್ರತೆಗೆ ಧಕ್ಕೆಯಾಗುವುದನ್ನು ಖಂಡಿಸುವುದಾಗಿ ತಿಳಿಸಿರುವ ಮೋದಿ, ಸಂಘರ್ಷದ ವೇಳೆ ಸಾವಿರಾರು ಭಾರತೀಯರು ಸುರಕ್ಷಿತವಾಗಿ ದೇಶಕ್ಕೆ ವಾಪಸ್ ಆಗಲು ನೆರವಾಗಿದ್ದಕ್ಕೆ ಧನ್ಯವಾದ ಹೇಳಿದ್ದಾರೆ.
ಸಂಘರ್ಷದಲ್ಲಿ ಪಾಲ್ಗೊಂಡಿರುವ ರಾಷ್ಟ್ರಗಳು ʼಮಾತುಕತೆ ಹಾಗೂ ರಾಜತಾಂತ್ರಿಕ ಮಾರ್ಗವನ್ನು ಅನುಸರಿಸಬೇಕುʼ ಎಂದು ಮ್ಯಾಕ್ರನ್ ಜೊತೆಗಿನ ಮಾತುಕತೆ ವೇಳೆ ಪ್ರತಿಪಾದಿಸಿದ್ದಾರೆ.
ಇಬ್ರಾಹಿಂ ಅವರೊಂದಿಗಿನ ಸಂಭಾಷಣೆ ವೇಳೆ, ʼಪಶ್ಚಿಮ ಏಷ್ಯಾದಲ್ಲಿನ ಪರಿಸ್ಥಿತಿ ಬಗ್ಗೆ ಚರ್ಚಿಸಿದ್ದೇವೆ. ಸಂವಾದ, ರಾಜತಾಂತ್ರಿಕತೆಯ ಮೂಲಕ ಸಂಘರ್ಷ ಶಮನಗೊಳಿಸಲು, ಶಾಂತಿ ಮತ್ತು ಸ್ಥಿರತೆಯನ್ನು ಸಾಧ್ಯವಾದಷ್ಟು ಬೇಗನೆ ಪುನಃಸ್ಥಾಪಿಸುವುದಕ್ಕೆ ಬದ್ಧರಾಗಿರುವುದಾಗಿ ಪುನರುಚ್ಚರಿಸಿದ್ದೇವೆʼ ಎಂದು ಮಾಹಿತಿ ನೀಡಿದ್ದಾರೆ.
ಇಸ್ರೇಲ್ ಹಾಗೂ ಅಮೆರಿಕ ಪಡೆಗಳು ಇರಾನ್ ಮೇಲೆ ಫೆಬ್ರುವರಿ 28ರಂದು ಜಂಟಿ ದಾಳಿ ನಡೆಸಿದ್ದವು. ದಾಳಿ ವೇಳೆ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸೇರಿದಂತೆ ಹಲವರು ಹತ್ಯೆಯಾಗಿದ್ದರು. ಅದರ ಬೆನ್ನಲ್ಲೇ, ಇರಾನ್ ಪ್ರತಿದಾಳಿ ನಡೆಸುತ್ತಿದೆ. ಹೀಗಾಗಿ, ಪಶ್ಚಿಮ ಏಷ್ಯಾದಾದ್ಯಂತ ಉದ್ವಿಗ್ನತೆ ತೀವ್ರಗೊಂಡಿದೆ.
ಈ ಬೆಳವಣಿಗೆ ನಡೆಯುತ್ತಿರುವ ಹೊತ್ತಲ್ಲಿ, ಮೋದಿ ಅವರು ಒಮಾನ್ ಸುಲ್ತಾನರೊಂದಿಗೆ ಎರಡನೇ ಸಲ ಮಾತುಕತೆ ನಡೆಸಿದಂತಾಗಿದೆ. ಮಾತ್ರವಲ್ಲದೆ, ಸೌದಿ ಅರೇಬಿಯಾ, ಬಹರೇನ್, ಯುಎಇ, ಜೋರ್ಡಾನ್, ಇರಾನ್ ಹಾಗೂ ಇಸ್ರೇಲ್ ಸೇರಿದಂತೆ ಹಲವು ರಾಷ್ಟ್ರಗಳ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ.

