ಪಶ್ಚಿಮ ಏಶ್ಯಾದಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ(ಮಾರುಕಟ್ಟೆ ಮತ್ತು ತೈಲ ಸಂಸ್ಕರಣಾಗಾರ) ಸುಜಾತಾ ಶರ್ಮಾ ಅವರು, ಇಂಧನ ಪೂರೈಕೆಯನ್ನು ಸ್ಥಿರಗೊಳಿಸಲು ಮತ್ತು ಅಗತ್ಯ ಸೇವೆಗಳನ್ನು ನಿರ್ವಹಿಸಲು ಸರಕಾರವು ಹಲವಾರು ಪರಿಣಾಮಕಾರಿ ಕ್ರಮಗಳನ್ನು ಜಾರಿಗೊಳಿಸಿದೆ ಎಂದು ಹೇಳಿದರು.
ನಿಮಗೆ ತಿಳಿದಿರುವಂತೆ ಪಶ್ಚಿಮ ಏಶ್ಯಾ ಬಿಕ್ಕಟ್ಟು ಭಾರತದ ಇಂಧನ ಪೂರೈಕೆಗಳ ಮೇಲೆಯೂ ವ್ಯತಿರಿಕ್ತ ಪರಿಣಾಮಗಳನ್ನು ಬೀರಿದೆ. ಆದರೆ ಭಾರತ ಸರಕಾರವು ಹಲವಾರು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ದೇಶಿಯ ಪಿಎನ್ಜಿ ಮತ್ತು ಎಲ್ಪಿಜಿ ಗ್ರಾಹಕರಿಗೆ ಆದ್ಯತೆ ನೀಡುವ ಮೂಲಕ ಶೇ.100ರಷ್ಟು ಪೂರೈಕೆಯನ್ನು ಖಚಿತಪಡಿಸಲಾಗಿದೆ. ಇದರ ಜೊತೆಗೆ ಸಿಎನ್ಜಿ ಸಾಗಾಣಿಕೆಯನ್ನು ಶೇ.100ರಷ್ಟು ಖಚಿತಪಡಿಸಿಕೊಳ್ಳಲಾಗಿದೆ ಎಂದು ಶರ್ಮಾ ತಿಳಿಸಿದರು.
ಸರಕಾರದ ಪ್ರಯತ್ನಗಳನ್ನು ಬೆಂಬಲಿಸಲು ದೇಶೀಯ ಸಂಸ್ಕರಣಾಗಾರಗಳು ಎಲ್ಪಿಜಿ ಉತ್ಪಾದನೆಯನ್ನು ಹೆಚ್ಚಿಸಿವೆ. ಇದೇ ವೇಳೆ ಬೇಡಿಕೆಯನ್ನು ನಿಭಾಯಿಸಲು ಸರಕಾರವು ಬುಕಿಂಗ್ ಅವಧಿಯನ್ನು ನಗರ ಪ್ರದೇಶಗಳಲ್ಲಿ 25 ದಿನಗಳಿಗೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳಿಗೆ ನಿಗದಿಗೊಳಿಸಿದೆ ಎಂದರು.
ಈ ವ್ಯೆಹಾತ್ಮಕ ಕ್ರಮಗಳಿಂದಾಗಿ ವಾಣಿಜ್ಯ ಎಲ್ಪಿಜಿ ಪೂರೈಕೆಯನ್ನು ಶೇ.70ರಷ್ಟು ಹೆಚ್ಚಿಸಲು ಸಾಧ್ಯವಾಗಿದೆ. ಸರಕಾರವು ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಔಷಧಿಗಳು, ಉಕ್ಕು, ವಾಹನಗಳು ಮತ್ತು ಕೃಷಿಯಂತಹ ಕೈಗಾರಿಕೆಗಳು ಸೇರಿದಂತೆ ಪ್ರಮುಖ ವಲಯಗಳಿಗೂ ಆದ್ಯತೆಯನ್ನು ನೀಡಿದೆ. ಮಾ.14ರಿಂದ 1,34,000 ಟನ್ಗಳಷ್ಟು ವಾಣಿಜ್ಯ ಎಲ್ಪಿಜಿಯನ್ನು ಮಾರಾಟ ಮಾಡಲಾಗಿದೆ ಎಂದು ಶರ್ಮಾ ಹೇಳಿದರು.
ದೇಶಿಯ ಎಲ್ಪಿಜಿ ಪೂರೈಕೆಯು ಸಹಜ ಸ್ಥಿತಿಯಲ್ಲಿದೆ. ಐದು ಕೆಜಿ ಸಿಲಿಂಡರ್ಗಳ ಸಂಖ್ಯೆಯನ್ನು ದ್ವಿಗುಣಗೊಳಿಸಲಾಗಿದೆ. ಮಾ.23ರಿಂದ ಐದು ಕೆ.ಜಿ.ಯ ಸುಮಾರು 14,60,000 ಸಿಲಿಂಡರ್ಗಳನ್ನು ಮಾರಾಟ ಮಾಡಲಾಗಿದೆ. ಸೀಮೆಎಣ್ಣೆ ಮತ್ತು ಕಲ್ಲಿದ್ದಲಿನಂತಹ ಪರ್ಯಾಯ ಇಂಧನ ಆಯ್ಕೆಗಳನ್ನೂ ಬಳಕೆದಾರರಿಗೆ ಲಭ್ಯವಾಗಿಸಲಾಗಿದೆ ಎಂದು ಅವರು ತಿಳಿಸಿದರು.

