ಪುರಿ: ಪುರಿ ಜಗನ್ನಾಥ ದೇವಾಲಯದ 'ರತ್ನ ಭಂಡಾರ'ದ ಎರಡನೇ ಹಂತದ ಪರಿಶೀಲನೆ ಕಾರ್ಯ ಬುಧವಾರ ಪ್ರಾರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೇವಕರು, ರತ್ನಶಾಸ್ತ್ರಜ್ಞರು ಮತ್ತು ಅಕ್ಕಸಾಲಿಗರ ತಂಡವು ಬೆಳಿಗ್ಗೆ 11.30ಕ್ಕೆ ರತ್ನ ಭಂಡಾರ ಸಮಿತಿಯ ಅಧ್ಯಕ್ಷ ನ್ಯಾಯಮೂರ್ತಿವಿಶ್ವನಾಥ ರಥ ಮತ್ತು ಶ್ರೀ ಜಗನ್ನಾಥ ದೇವಾಲಯದ ಆಡಳಿತ ಮಂಡಳಿತ ಮುಖ್ಯ ಆಡಳಿತಾಧಿಕಾರಿ ಅರವಿಂದ ಪಧಿ ಅವರೊಂದಿಗೆ ದೇವಾಲಯದ ಖಜಾನೆಯನ್ನು ಪ್ರವೇಶಿಸಿತು.
ದೇವತೆಗಳ ನಿತ್ಯಬಳಕೆಯ ಆಭರಣಗಳ ಪರಿಶೀಲನೆ ಕಾರ್ಯವು ಮಾರ್ಚ್ 25ರಂದು ಆರಂಭವಾಗಿತ್ತು. ಕಳೆದ 48 ವರ್ಷಗಳಲ್ಲೇ ಮೊದಲ ಬಾರಿಗೆ ನಡೆಯುತ್ತಿರುವ ಪ್ರಕ್ರಿಯೆ ಇದಾಗಿದೆ.
'ಮೊದಲ ಹಂತದಲ್ಲಿ, ಪಾರದರ್ಶಕತೆಯನ್ನು ಖಚಿತಪಡಿಸಲು ಸಂಪೂರ್ಣ ಪ್ರಕ್ರಿಯೆಯ ವಿಡಿಯೊಗ್ರಫಿ, ಛಾಯಾಗ್ರಹಣ ಮತ್ತು ತ್ರಿಡಿ ಮ್ಯಾಪಿಂಗ್ ಮಾಡಲಾಗುತ್ತಿದೆ' ಎಂದು ಅರವಿಂದ ಪಧಿ ಹೇಳಿದ್ದಾರೆ.
'ಪ್ರಸ್ತುತ ಹಂತದ ಪರಿಶೀಲನೆ ಏಪ್ರಿಲ್ 11ರವರೆಗೆ ನಡೆಯಲಿದೆ. ನಂತರದ ಹಂತವು ಏಪ್ರಿಲ್ 13 ಮತ್ತು ಏಪ್ರಿಲ್ 16ರಿಂದ 18ರ ವರೆಗೆ ನಡೆಯಲಿದೆ. ದೇವಾಲಯದ ಆಚರಣೆಗಳು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯಲಿದ್ದು, ಭದ್ರತಾ ಕಾರಣಗಳಿಗಾಗಿ ಭಕ್ತರು ಹೊರಗಿನ ಬ್ಯಾರಿಕೇಡ್ನಿಂದ ದರ್ಶನ ಪಡೆಯಬಹುದು' ಎಂದು ಅವರು ಹೇಳಿದ್ದಾರೆ.
1978ರ ಪಟ್ಟಿಯ ಪ್ರಕಾರ, ದೇವಾಲಯದ ಖಜಾನೆಯು 111 ವಸ್ತುಗಳನ್ನು ಹೊಂದಿದ್ದು, ಅವುಗಳಲ್ಲಿ 78 ಚಿನ್ನ ಮಿಶ್ರಿತ ಮತ್ತು 33 ಬೆಳ್ಳಿ ಮಿಶ್ರಿತ ಆಭರಣಗಳು ಇವೆ.

