ಕಾಸರಗೋಡು: ಶ್ರೀರಾಮಚಂದ್ರಾಪುರ ಮಠದ ಪರಮಪೂಜ್ಯ ಶ್ರೀ ರಾಘವೇಶ್ವರ ಭಶರತೀ ಮಹಾಸ್ವಾಮಿಗಳವರನ್ನು ಕಾಸರಗೋಡು ವಿಧಾನಸಭಾ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಅಶ್ವಿನಿ ಎಂ.ಎಲ್. ಅವರು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು. ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಂದರ್ಭ ಶ್ರೀಕ್ಷೇತ್ರಕ್ಕೆ ಆಗಮಿಸಿದ್ದ ಶ್ರೀಗಳನ್ನು ಕ್ಷೇತ್ರದ ಸಮೀಪ ಶ್ರೀಸವಾರಿಯ ಮೊಕ್ಕಾಂ ನಿವಾಸದಲ್ಲಿ ಭಾನುವಾರ ಭೇಟಿ ಮಾಡಿ ಪಾದುಕಾ ಪೂಜೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಶ್ರೀಗಳು ಅನುಗ್ರಹ ಮಂತ್ರಾಕ್ಷತೆಯನ್ನಿತ್ತು ಹರಸಿ, ಕೇರಳ ರಾಜ್ಯದ ರಾಜಕೀಯದಲ್ಲಿ ಬದಲಾವಣೆಯ ಪರ್ವದ ಲಕ್ಷಣಗಳು ಗೋಚರಿಸುತ್ತಿವೆ. ಅನಿವಾರ್ಯವೂ ಹೌದು. ಗೋಸಂರಕ್ಷಣೆ ಹಾಗೂ ಹಿಂದೂ ಧಾರ್ಮಿಕ ಹಿತರಕ್ಷಣೆಯನ್ನು ಕಾಪಾಡುವಂತಹ ಜನರು ಆಯ್ಕೆಯಾಗಬೇಕು ಎಂದು ತಿಳಿಸಿದ ಅವರು ಸಮಾಜದ ಪೂರ್ಣ ಬೆಂಬಲ ಹಾಗೂ ಶ್ರೀಪೀಠದ ಅನುಗ್ರಹ ಸದಾ ಜೊತೆಗಿದೆ ಎಂದು ಮಂತ್ರಾಕ್ಷತೆಯನ್ನಿತ್ತು ಹರಸಿದರು. ಈ ಸಂದರ್ಭದಲ್ಲಿ ಶ್ರೀಮಠದ ಕಾನೂನು ವಿಭಾಗದ ವಕೀಲ ಅರುಣ ಶ್ಯಾಮ, ಮುಳ್ಳೇರಿಯ ಮಂಡಲದ ಮಹೇಶ ಸರಳಿ, ಬಿಜೆಪಿ ಬದಿಯಡ್ಕ ಪಂಚಾಯಿತಿ ಸಮಿತಿ ಅಧ್ಯಕ್ಷ ಮಹೇಶ್ ವಳಕ್ಕುಂಜ ಮತ್ತಿತರರು ಜೊತೆಗಿದ್ದರು.


