ಕುಂಬಳೆ: ಮುಸ್ಲಿಂ ಲೀಗ್ ನಾಯಕರು ಭರವಸೆ ನೀಡಿದ ಮಾತನ್ನು ಉಳಿಸಿಕೊಂಡಿಲ್ಲ ಎಂದು ಆರೋಪಿಸಿ ಮಂಜೇಶ್ವರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸಕ್ರಿಯ ಮುಸ್ಲಿಂ ಲೀಗ್ ಕಾರ್ಯಕರ್ತ ಕಣ್ಣೂರು ಅಬ್ದುಲ್ಲ ಮಾಸ್ತರ್ ಪ್ರಚಾರದಲ್ಲಿ ಸಕ್ರಿಯರಾಗಿದ್ದಾರೆ.
ಕಳೆದ ಚುನಾವಣೆಯಲ್ಲಿ ಕೇವಲ ಏಳುನೂರಕ್ಕೂ ಹೆಚ್ಚು ಮತಗಳ ಬಹುಮತದಿಂದ ಗೆದ್ದ ಮುಸ್ಲಿಂ ಲೀಗ್ ಅನ್ನು ಉಳಿಸಲು ಕಾರ್ಯಕರ್ತರು ಅವಿರತವಾಗಿ ಶ್ರಮಿಸುತ್ತಿರುವ ಪರಿಸ್ಥಿತಿಯಲ್ಲಿ ಹಿರಿಯ ನಾಯಕ ಕಣ್ಣೂರು ಅಬ್ದುಲ್ಲ ಮಾಸ್ತರ್ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣಾ ಕ್ಷೇತ್ರದಲ್ಲಿ ಪಕ್ಷದ ರಾಷ್ಟ್ರ ಮಟ್ಟದ ನಾಯಕರ ಸಹಿತ ಎಲ್ಲಾ ನೇತಾರರ ಅಪ್ರಬುದ್ಧತೆ ಮತ್ತು ಆಶಾಢಭೂತಿತನವನ್ನು ಬಹಿರಂಗಗೊಳಿಸಲು ಹತಾಶೆಯೊಂದಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಕಣದಲ್ಲಿರುವುದಾಗಿ ಕುಂಬಳೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
14 ವರ್ಷಗಳ ಹಿಂದೆ, ಕತಾರ್ನಲ್ಲಿರುವ ಲೀಗ್ ನಾಯಕ ಪರಕ್ಕಲ್ ಅಬ್ದುಲ್ಲ ಎಂಬವರ ಸಂಬಂಧಿಕರು, ತಮ್ಮ ಪುತ್ರ ಮುಹಮ್ಮದ್ ಇರ್ಷಾದ್ ಅವರಿಂದ ವ್ಯವಹಾರಕ್ಕಾಗಿ 1.18 ಕೋಟಿ ರೂ.ಗಳನ್ನು ಪಡೆದಿದ್ದರು. ಬಳಿಕ ಹಿಂತಿರುಗಿಸದ ಕಾರಣ ಉನ್ನತ ನಾಯಕರಿಗೆ ದೂರು ನೀಡಲಾಗಿತ್ತು. ಆ ಸಮಯದಲ್ಲಿ, ಕುನ್ಹಾಲಿಕುಟ್ಟಿ ಸೇರಿದಂತೆ ನಾಯಕರು ಹಣವನ್ನು ಅವರಿಗೆ ನೀಡುವುದಾಗಿ ಭರವಸೆ ನೀಡಿದ್ದರು. ಇದನ್ನು ನಂಬಿದ ಅಬ್ದುಲ್ಲ ಮಾಸ್ತರ್ ಮತ್ತು ಅವರ ಕುಟುಂಬ ನಂತರ ಕುನ್ಹಾಲಿಕುಟ್ಟಿ ಮತ್ತು ಇತರ ನಾಯಕರನ್ನು ಸಂಪರ್ಕಿಸಲು ಹಲವಾರು ಬಾರಿ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಬಳಿಕ ಅಬ್ದುಲ್ಲ ಮಾಸ್ತರ್ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ನಾಮಪತ್ರಗಳನ್ನು ಸಲ್ಲಿಸಲು ಮುಂದಾದರು. ಉಪಚುನಾವಣೆ ಸೇರಿದಂತೆ ಚುನಾವಣೆಗಳಲ್ಲಿ ನಾಯಕರು ಮಧ್ಯಪ್ರವೇಶಿಸಿದ್ದರಿಂದ ತಮ್ಮ ನಾಮಪತ್ರಗಳನ್ನು ಹಿಂತೆಗೆದುಕೊಂಡಿದ್ದರೂ, ಪ್ರಸ್ತುತ ಶಾಸಕರು ಮತ್ತು ಲೀಗ್ ಕ್ಷೇತ್ರದ ಕಾರ್ಯದರ್ಶಿ ಈ ಚುನಾವಣೆಯಲ್ಲಿ ಬೇಜವಾಬ್ದಾರಿಯುತ ಧೋರಣೆಯನ್ನು ಅನುಸರಿಸುತ್ತಿದ್ದಾರೆ ಎಂದು ಅಬ್ದುಲ್ಲ ಮಾಸ್ತರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅವರ ಪುತ್ರ ಮುಹಮ್ಮದ್ ಇರ್ಷಾದ್, ಜಮಾಲ್ ಪುತ್ತಿಗೆ, ಸಿರಾಜ್ ಕಣ್ಣೂರು ಮತ್ತು ಸಫ್ವಾನ್ ಮೊಗ್ರಾಲ್ ಸುದ್ದಿಗೋಷ್ಠಿಯಲ್ಲಿ ಜೊತೆಗಿದ್ದರು.



