ಶ್ರೀನಗರ: ಜಮ್ಮು ಹಾಗೂ ಕಾಶ್ಮೀರದ ರಾಂಬನ್ ಜಿಲ್ಲೆ ನಕಲಿ ಗೋರಕ್ಷಕರು ಬೆನ್ನಟ್ಟಿಕೊಂಡು ಬಂದು ಹಲ್ಲೆ ನಡೆಸಿದ ಸಂದರ್ಭ ಬಿಶ್ಲೇರಿ ನದಿಗೆ ಬಿದ್ದಿದ್ದಾನೆಂದು ಹೇಳಲಾದ 18 ವರ್ಷದ ತನ್ವೀರ್ ಅಹ್ಮದ್ ಚೋಪನ್ ಶೋಧ ಕಾರ್ಯಾಚರಣೆ ಶುಕ್ರವಾರ 13ನೇ ದಿನಕ್ಕೆ ಮುಂದುವರಿದಿದ್ದು, ಮೃತದೇಹ ಇನ್ನೂ ಪತ್ತೆಯಾಗಿಲ್ಲ.
ಪ್ರತಿಕೂಲ ಪರಿಸ್ಥಿತಿಯ ಹೊರತಾಗಿಯೂ ಪ್ರಯತ್ನ ಮುಂದುವರಿದಿದೆ. ಚೋಪನ್ನ ಅಂತ್ಯಕ್ರಿಯೆಯನ್ನು ಗೌರವಯುತವಾಗಿ ನಡೆಸಲು ಮೃತದೇಹವನ್ನು ಪತ್ತೆ ಹಚ್ಚಿ ತ್ವರಿತವಾಗಿ ಹಸ್ತಾಂತರಿಸುವಂತೆ ಅವರ ಕುಟುಂಬ ಆಗ್ರಹಿಸಿದೆ
ಶೋಧ ಕಾರ್ಯಾಚರಣೆಯಲ್ಲಿ ಎನ್ಡಿಆರ್ಎಫ್, ಎಸ್ಡಿಆರ್ಎಫ್, ಪೊಲೀಸ್ ತಂಡ, ಕ್ಷಿಪ್ರ ಕಾರ್ಯ ತಂಡ, ನಾಗರಿಕ ಆಡಳಿತ ಅಧಿಕಾರಿ ಹಾಗೂ ಸ್ಥಳೀಯ ಸ್ವಯಂ ಸೇವಕರು ಸೇರಿದಂತೆ ಹಲವು ಸಂಸ್ಥೆ ಹಾಗೂ ಜನರು ಪಾಲ್ಗೊಂಡಿದ್ದಾರೆ ಎಂದು ರಾಂಬನ್ನ ಹಿರಿಯ ಪೊಲೀಸ್ ಅಧೀಕ್ಷಕ (ಎಸ್ಎಸ್ಪಿ) ಅರುಣ್ ಗುಪ್ತಾ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ದಿಗ್ವಿಜಯ ಸಿಂಗ್, ಕೇವಲ್ ಸಿಂಗ್, ಸುರ್ಜೀತ್ ಸಿಂಗ್ ಹಾಗೂ ಸಂದೀಪ್ ಸಿಂಗ್ನನ್ನು ಬಂಧಿಸಲಾಗಿದೆ. ಎಲ್ಲರೂ ರಾಂಬನ್ ನಿವಾಸಿಗಳು. ಘಟನೆಗೆ ಸಂಬಂಧಿಸಿ ಸಾಕ್ಷಿಗಳ ಹೇಳಿಕೆಗಳ ಆಧಾರದಲ್ಲಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.

