ಲಖನೌ: ಕಿರುಕುಳ ನೀಡುತ್ತಿದ್ದ ಪತಿಯಿಂದ ಮಗಳಿಗೆ ವಿಚ್ಛೇದನ ಸಿಗುತಿದ್ದಂತೆ ಪೋಷಕರು ನ್ಯಾಯಾಲಯದ ಆವರಣದಲ್ಲೇ ಸಿಹಿ ತಿನ್ನಿಸಿ ಸಂಭ್ರಮಿಸಿದ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದೆ.
ಪ್ರಣೀತಾ ಎಂಬುವರು ಡಿಸೆಂಬರ್ 2018ರಲ್ಲಿ ಸೇನಾ ಮೇಜರ್ ಗೌರವ್ ಅಗ್ನಿಹೋತ್ರಿ ಅವರನ್ನು ವಿವಾಹವಾಗಿದ್ದರು.
ಪತಿಯ ಮನೆಯಲ್ಲಿ ಮಾನಸಿಕವಾಗಿ ಮತ್ತು ದೈಹಿಕ ಕಿರುಕುಳವನ್ನು ಎದುರಿಸುತ್ತಿದ್ದರು ಎನ್ನಲಾಗಿದೆ. ಹೀಗಾಗಿ ಗಂಡನಿಂದ ವಿಚ್ಛೇದನ ಪಡೆಯಲು ನಿರ್ಧರಿಸಿದ ಪ್ರಣೀತಾಗೆ ಪೋಷಕರ ಬೆಂಬಲವೂ ಸಿಕ್ಕಿತ್ತು.
7 ವರ್ಷಗಳ ದಾಂಪತ್ಯ ಜೀವನ ಅಂತ್ಯ
2018ರಲ್ಲಿ ಪ್ರಾರಂಭವಾಗಿದ್ದ ಈ ಪ್ರಕ್ರಿಯೆ, ಏಪ್ರಿಲ್ 4ರಂದು ನ್ಯಾಯಾಲಯವು ವಿಚ್ಛೇದನ ನೀಡಿ ತೀರ್ಪು ಹೊರಡಿಸಿದೆ. 7 ವರ್ಷಗಳ ನಂತರ ಮಗಳಿಗೆ ವಿಚ್ಛೇದನ ಸಿಗುತ್ತಿದ್ದಂತೆ ಕುಟುಂಬಸ್ಥರು ಮೀರತ್ ಕೌಟುಂಬಿಕ ನ್ಯಾಯಾಲಯದ ಹೊರಗಡೆ ನೃತ್ಯ ಮಾಡಿ, ಒಬ್ಬರಿಗೊಬ್ಬರು ಸಿಹಿ ತಿನ್ನಿಸಿ, ಡೊಳ್ಳು ಬಾರಿಸುತ್ತಾ ಸಂಭ್ರಮಿಸಿದ್ದಾರೆ.
ಇದೇ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ವಿಡಿಯೊದಲ್ಲಿ ಕುಟುಂಬಸ್ಥರು ಕಪ್ಪು ಟಿ ಶರ್ಟ್ ಮೇಲೆ ಪ್ರಣೀತಾ ಅವರ ಫೋಟೊವನ್ನು ಮುದ್ರಣ ಮಾಡಿ 'ಐ ಲವ್ ಮೈ ಡಾಟರ್' ಎಂದು ಬರೆದಿರುವುದನ್ನು ಕಾಣಬಹುದು.
ಅಧಿಕೃತವಾಗಿ ವಿಚ್ಛೇದನ ಪಡೆದು ಮನೆಗೆ ಬಂದ ಮಗಳನ್ನು ತಂದೆ ನಿವೃತ್ತ ನ್ಯಾಯಾಧೀಶ ಡಾ. ಜ್ಞಾನೇಂದ್ರ ಶರ್ಮಾ ಅವರು ಸಂತಸದಿಂದ ಬರಮಾಡಿಕೊಂಡರು. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಣೀತಾ, 'ನನ್ನ ತಂದೆ ನನಗೆ ತುಂಬಾ ಬೆಂಬಲ ನೀಡಿದರು. ಕಷ್ಟದ ಸಮಯದಲ್ಲಿ ಬೆಂಬಲವಾಗಿ ನಿಲ್ಲುವ ಕುಟುಂಬ ಎಲ್ಲರಿಗೂ ಸಿಗಬೇಕು ಎಂದು ನಾನು ಬಯಸುತ್ತೇನೆ' ಎಂದಿದ್ದಾರೆ.

