ಮುಂಬೈ: ಇಲ್ಲಿನ ನಯಾ ನಗರ ಪ್ರದೇಶದಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಯ ಧರ್ಮ ವಿಚಾರಿಸಿ, ನಂತರ ಅವರಿಗೆ ಚಾಕು ಇರಿದ ಆರೋಪದ ಮೇಲೆ 31 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಯನ್ನು ಜೈಬ್ ಜುಬೇರ್ ಅನ್ಸಾರಿ ಎಂದು ಗುರುತಿಸಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಆರೋಪಿಯು ಭದ್ರತಾ ಸಿಬ್ಬಂದಿಗೆ ಇಸ್ಲಾಂ ಧರ್ಮದ ಮೂಲ ತತ್ವವಾದ 'ಕಲ್ಮಾ' ಪಠಿಸುವಂತೆ ಒತ್ತಾಯಿಸಿದ್ದ ಎನ್ನಲಾಗಿದೆ.
ಈ ದಾಳಿಯು ಸೋಮವಾರ ಮುಂಜಾನೆ 4 ಗಂಟೆಗೆ ಇಲ್ಲಿನ ವೊಕಾರ್ಡ್ ಆಸ್ಪತ್ರೆ ಹಿಂಭಾಗದಲ್ಲಿರುವ ನಿರ್ಮಾಣ ಹಂತದ ಕಟ್ಟಡದ ಬಳಿ ನಡೆದಿದೆ. ಗಾಯಗೊಂಡ ಭದ್ರತಾ ಸಿಬ್ಬಂದಿಯನ್ನು ರಾಜಕುಮಾರ್ ಮಿಶ್ರಾ ಮತ್ತು ಸುಬ್ರತೊ ಸೇನ್ ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಮಿಶ್ರಾ ತಾವಾಗಿಯೇ ಆಸ್ಪತ್ರೆ ತಲುಪಿದರು. ಆದರೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸುಬ್ರತೊ ಅವರನ್ನು ಆಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಕೇವಲ 90 ನಿಮಿಷಗಳಲ್ಲಿ ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಠಾಣೆ ನ್ಯಾಯಾಲಯ ಆರೋಪಿ ಅನ್ಸಾರಿಯನ್ನು ಮೇ 4ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಿದೆ.
ಆರೋಪಿಯ ಬಳಿಯಿದ್ದ ಮೊಬೈಲ್ ಫೋನ್ ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳನ್ನು ಪರಿಶೀಲಿಸಲಾಗುತ್ತಿದೆ. ಅನ್ಸಾರಿ ಡೈರಿಯಲ್ಲಿ ಜಿಹಾದ್, ಗಾಜಾ ಮತ್ತು ಒಂಟಿ ತೋಳ ದಂತಹ ಪದಗಳು ಕಂಡುಬಂದಿವೆ. ಇದು ವೈಯಕ್ತಿಕ ದಾಳಿಯೆ ಅಥವಾ ಪಿತೂರಿಯ ಭಾಗವೇ ಎಂಬುದನ್ನು ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಅನ್ಸಾರಿ ಹಲವು ವರ್ಷಗಳ ಕಾಲ ಅಮೆರಿಕದಲ್ಲಿ ವಾಸವಾಗಿದ್ದು ಅವರ ಕುಟುಂಬದವರು ಅಲ್ಲೇ ನೆಲೆಸಿದ್ದಾರೆ. ಅಲ್ಲಿ ಕೆಲಸ ಸಿಗದ ಕಾರಣ ಅನ್ಸಾರಿ ಭಾರತಕ್ಕೆ ಮರಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

