ನವದೆಹಲಿ: ತಮ್ಮ ಮೇಲೆ ದಾಖಲಾಗಿರುವ ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣದ ವಿಚಾರಣೆ ನಡೆಸುತ್ತಿರುವ ದೆಹಲಿ ಹೈಕೋರ್ಟ್ನ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರ ಮಕ್ಕಳು ಕೇಂದ್ರ ಸರ್ಕಾರದ ವಕೀಲರಾಗಿದ್ದು, ಸಿಬಿಐ ಪರ ಹಾಜರಾಗುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಮೂಲಕ ಕೆಲಸ ಪಡೆಯುತ್ತಿದ್ದಾರೆ ಎಂದು ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ಅಫಿಡವಿಟ್ನಲ್ಲಿ ಪ್ರತಿಪಾದಿಸಿದ್ದಾರೆ.
ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯಬೇಕು ಎಂದು ಕೋರಿರುವ ಅರ್ಜಿ ಸಂಬಂಧ ಸಲ್ಲಿಸಿರುವ ಹೆಚ್ಚುವರಿ ಅಫಿಡವಿಟ್ನಲ್ಲಿ ಅವರು ಹೀಗೆ ಹೇಳಿದ್ದಾರೆ.
ನ್ಯಾಯಮೂರ್ತಿ ಶರ್ಮಾ ಅವರ ಪೀಠದ ಮುಂದೆ ಈ ಪ್ರಕರಣದ ವಿಚಾರಣೆಯನ್ನು ಮುಂದುವರಿಸುವುದರಿಂದ ನ್ಯಾಯಾಂಗ ತಟಸ್ಥ, ಸ್ವತಂತ್ರ್ಯವಾಗಿ ಕೆಲಸ ಮಾಡಲಿಕ್ಕಿಲ್ಲ ಎನ್ನುವ ಭಯ ಉಂಟಾಗಿದೆ. ಹೀಗಾಗಿ ಪ್ರತ್ಯುತ್ತರ ಸಲ್ಲಿಸಲು ಹೆಚ್ಚಿನ ಕಾಲಾವಕಾಶ ನೀಡುವಂತೆಯೂ ಅವರು ಕೋರಿದ್ದಾರೆ.
'ಈ ಕ್ರಿಮಿನಲ್ ಪ್ರಕರಣದಲ್ಲಿ, ಸಿಬಿಐ ಪ್ರಾಸಿಕ್ಯೂಟಿಂಗ್ ಏಜೆನ್ಸಿಯಾಗಿದ್ದು ಕೇಂದ್ರ ಸರ್ಕಾರದ ಅತ್ಯುನ್ನತ ಕಾನೂನು ಅಧಿಕಾರಿಗಳು ನನ್ನ ವಿರುದ್ಧ ವಾದ ಮಂಡಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನ್ಯಾಯಮೂರ್ತಿಗಳ ಕುಟುಂಬದ ನಿಕಟ ಸದಸ್ಯರು ಕೇಂದ್ರ ಸರ್ಕಾರದ ವಕೀಲರ ಪಟ್ಟಿಯಲ್ಲಿ ಅನೇಕ ಸಕ್ರಿಯ ಕಾರ್ಯಗಳಲ್ಲಿ ತೊಡಗಿಸಿಕೊಂಡು, ಅದೇ ಕಾನೂನು ಸಂಸ್ಥೆ ಮತ್ತು ಕಾನೂನು ಅಧಿಕಾರಿಯ ಮೂಲಕ ಸರ್ಕಾರದ ಕೆಲಸಗಳನ್ನು ಪಡೆಯುತ್ತಿರುವುದು ನನ್ನ ಆತಂಕಕ್ಕೆ ಕಾರಣವಾಗಿದೆ' ಎಂದು ಏಪ್ರಿಲ್14 ರಂದು ಸಲ್ಲಿಸಿದ ಅಫಿಡವಿಟ್ನಲ್ಲಿ ಪ್ರತಿಪಾದಿಸಲಾಗಿದೆ.
ಆರ್ಟಿಐ ಮೂಲಕ ಪಡೆದ ಮಾಹಿತಿ ಸೇರಿದಂತೆ ಸಾರ್ವಜನಿಕವಾಗಿ ಲಭ್ಯವಿರುವ ದಾಖಲೆಗಳನ್ನು ಕೇಜ್ರಿವಾಲ್ ಅಫಿಡವಿಟ್ನಲ್ಲಿ ಉಲ್ಲೇಖಿಸಿದ್ದಾರೆ. ನ್ಯಾಯಮೂರ್ತಿ ಶರ್ಮಾ ಅವರ ಪುತ್ರನಿಗೆ ಗಣನೀಯ ಪ್ರಮಾಣದ ಕಾನೂನು ಕೆಲಸಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ನ್ಯಾಯಮೂರ್ತಿಗಳ ಪುತ್ರನಿಗೆ 2023ರಲ್ಲಿ ಒಟ್ಟು 2,487, 2024ರಲ್ಲಿ 1,784 ಮತ್ತು 2025ರಲ್ಲಿ 1,633 ಪ್ರಕರಣಗಳನ್ನು ನೀಡಲಾಗಿತ್ತು ಎಂದು ಅಫಿಡವಿಟ್ನಲ್ಲಿ ತಿಳಿಸಲಾಗಿದೆ.

