ಪಾಲಕ್ಕಾಡ್: ವಿಶು ಉತ್ಸವ ಆಚರಣೆಯ ವೇಳೆ ಕೈಯಲ್ಲಿ ಹಿಡಿದಿದ್ದ ಪಟಾಕಿ ಸ್ಫೋಟಗೊಂಡು 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಶ್ರೀಕೃಷ್ಣಪುರಂನಲ್ಲಿ ನಡೆದಿದೆ ಎಂದು ಗುರುವಾರ ಪೊಲೀಸರು ತಿಳಿಸಿದ್ದಾರೆ.
ಮೃತ ವ್ಯಕ್ತಿಯನ್ನು ಶ್ರೀಕಕೃಷ್ಣಪುರಂ ನಿವಾಸಿ ದಿಲೀಪ್ ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ವಿಶು ಉತ್ಸವ ಆಚರಣೆಯ ಭಾಗವಾಗಿ ದಿಲೀಪ್ ಹಾಗೂ ಅವರ ಸ್ನೇಹಿತರು ಬುಧವಾರ ಸಂಜೆ ಸುಮಾರು 8.30ಕ್ಕೆ ಶ್ರೀುಕೃಷ್ಣಪುರಂನ ಕ್ಲಬ್ ಒಂದರ ಬಳಿ ಪಟಾಕಿ ಸಿಡಿಸುತ್ತಿದ್ದರು ಎನ್ನಲಾಗಿದೆ.
ಒಂದಷ್ಟು ಪಟಾಕಿಗಳನ್ನು ತನ್ನ ಒಂದು ಕೈಯಲ್ಲಿ ಹಿಡಿದುಕೊಂಡು, ಮತ್ತೊಂದು ಪಟಾಕಿಗೆ ದಿಲೀಪ್ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಟಾಕಿ ಸ್ಫೋಟದ ವೇಳೆ ಸಿಡಿದ ಕಿಡಿಯೊಂದು ದಿಲೀಪ್ ಕೈಯಲ್ಲಿ ಹಿಡಿದಿದ್ದ ಪಟಾಕಿಗಳಿಗೆ ತಾಕಿದ್ದು, ಅವು ಸ್ಫೋಟಗೊಂಡು ಅವರು ಗಂಭೀರವಾಗಿ ಗಾಯಗೊಂಡರು ಎಂದು ಅಧಿಕಾರಿಗಳು ಹೇಳಿದ್ದಾರೆ.
ತಕ್ಷಣವೇ ದಿಲೀಪ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ರಾತ್ರಿ ಸುಮಾರು 10.30ರ ವೇಳೆಗೆ ಮೃತಪಟ್ಟಿದ್ದಾರೆ.
ಈ ಅವಘಡದ ಬೆನ್ನಿಗೇ ಸಂಭವಿಸಿದ ಹೃದಯಸ್ತಂಭನದಿಂದ ದಿಲೀಪ್ ಮೃತಪಟ್ಟಿರಬಹುದು ಎಂದು ವೈದ್ಯರು ಶಂಕಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಸಾವಿನ ನಿಖರ ಕಾರಣ ತಿಳಿದು ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಪ್ರಕರಣವೊಂದನ್ನು ದಾಖಲಿಸಿಕೊಂಡಿರುವ ಶ್ರೀ ಕೃಷ್ಣಪುರಂ ಠಾಣೆಯ ಪೊಲೀಸರು, ತನಿಖೆ ಪ್ರಾರಂಭಿಸಿದ್ದಾರೆ.

