ನವದೆಹಲಿ: ಕೇರಳಂ ವಿಧಾನಸಭಾ ಚುನಾವಣಾ ಫಲಿತಾಂಶ ಬಂದು 9 ದಿನ ಕಳೆದರೂ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಆಯ್ಕೆ ಮಾಡುವಲ್ಲಿ ವಿಫಲವಾಗಿದೆ. ಭಾರಿ ಲಾಬಿ, ಹಗ್ಗಜಗ್ಗಾಟ, ಸಸ್ಪೆನ್ಸ್ ಮತ್ತು ಮ್ಯಾರಥಾನ್ ಸಭೆಗಳ ಬಳಿಕ ಸಿಎಂ ಯಾರೆಂಬ ಕುತೂಹಲಕ್ಕೆ ಇಂದು ಗುರುವಾರ ತೆರೆ ಎಳೆಯುವುದಾಗಿ ಕಾಂಗ್ರೆಸ್ ಹೇಳಿದೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಡುವೆ ನಡೆದ 40 ನಿಮಿಷಗಳ ಸಭೆಯ ನಂತರ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಕಾಂಗ್ರೆಸ್ ಹೈಕಮಾಂಡ್ ಈ ಕುರಿತಾದ ಎಲ್ಲ ಚರ್ಚೆಗಳನ್ನು ನಡೆಸಿದ್ದು, ಕೇರಳಂನ ಮುಂದಿನ ಮುಖ್ಯಮಂತ್ರಿಯನ್ನು ಇಂದು ಘೋಷಣೆ ಮಾಡಲಿದ್ದಾರೆ ಎಂದು ತಿಳಿಸಿದರು.
'ಕೇರಳದ ಸಿಎಲ್ಪಿ ಸದಸ್ಯರ ಅಭಿಪ್ರಾಯದಂತೆ ಕಾಂಗ್ರೆಸ್ ಹೈಕಮಾಂಡ್ ಎಲ್ಲ ಚರ್ಚೆಗಳನ್ನು ಪೂರ್ಣಗೊಳಿಸಿದೆ. ಕೇರಳಂನ ಮುಂದಿನ ಮುಖ್ಯಮಂತ್ರಿ ಯಾರಾಗಬೇಕೆಂಬ ನಿರ್ಧಾರವನ್ನು ನಾಳೆ ಘೋಷಿಸಲಾಗುವುದು' ಎಂದು ರಮೇಶ್ ಹೇಳಿದ್ದಾರೆ.
ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿ 10 ದಿನಗಳ ನಂತರ ಪಕ್ಷದ ಆಯ್ಕೆಯ ಮೇಲಿನ ಸಸ್ಪೆನ್ಸ್ ಕೊನೆಗೊಳ್ಳಲಿದೆ. 140 ಸದಸ್ಯ ಬಲದ ಕೇರಳ ವಿದಾನಸಭೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ 102 ಸ್ಥಾನಗಳನ್ನು ಗಲ್ಲುವ ಮೂಲಕ ಸ್ಪಷ್ಟ ಬಹುಮತ ಗಳಿಸಿದೆ.
ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಮತ್ತು ಪಕ್ಷದ ಹಿರಿಯ ನಾಯಕ ರಮೇಶ್ ಚೆನ್ನಿತ್ತಲ ಅವರ ನಡುವೆ ಮುಖ್ಯಮಂತ್ರಿ ಗಾದಿಗೆ ಭಾರಿ ಪೈಪೋಟಿ ಏರ್ಪಟ್ಟಿದೆ.
ಸತೀಶನ್ ಅವರಿಗೆ ಮಿತ್ರ ಪಕ್ಷಗಳು, ಭಾರಿ ಜನಬೆಂಬಲವಿದೆ. ಹೈಕಮಾಂಡ್ ಜೊತೆ ಗುರುತಿಸಿಕೊಂಡಿರುವ ಕೆ.ಸಿ. ವೇಣುಗೋಪಾಲ್ ಸಹ ಪ್ರಬಲ ಆಕಾಂಕ್ಷಿಯಾಗಿದ್ದು, ಆಯ್ಕೆಯು ಹೈಕಮಾಂಡ್ಗೆ ಕಗ್ಗಂಟಾಗಿದೆ.

